ಶಿಡ್ಲಘಟ್ಟ: ನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿನ ಇ-ಪೇಮೆಂಟ್ ಅವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿ ನೂಲು ಬಿಚ್ಚಾಣಿಕೆದಾರರು ಗುರುವಾರ 2 ಗಂಟೆಗಳ ಕಾಲ ಇ-ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಾಜ್ಯದ ಅತೀದೊಡ್ಡ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸುವ ಮೊದಲು ನೂಲು ಬಿಚ್ಚಾಣಿಕೆದಾರರು ಮತ್ತು ರೇಷ್ಮೆ ಬೆಳೆಗಾರರೊಂದಿಗೆ ಕನಿಷ್ಠ ಸೌಜನ್ಯಕ್ಕಾದರೂ ಸಭೆ ನಡೆಸಲಿಲ್ಲ, ಇದರ ಲವಾಗಿ ಇಂದು ನೂಲು ಬಿಚ್ಚಾಣಿಕೆದಾರರು ಮತ್ತು ಬೆಳೆಗಾರರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ ಎಂದು ಪ್ರತಿಭಟನಾನಿರತರು ಮಾರುಕಟ್ಟೆ ಉಪನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಲು ತಮ್ಮ ಅಭ್ಯಂತರವಿಲ್ಲ, ಆದರೆ ಈ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಮಾರುಕಟ್ಟೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಜತೆಗೆ ಈ ವ್ಯವಸ್ಥೆ ಜಾರಿಯಾದ ಬಳಿಕ ಮಾರುಕಟ್ಟೆಗೆ ರೇಷ್ಮೆಗೂಡು ಬರುವುದೇ ಕಡಿಮೆಯಾಗಿದ್ದು ಬೆಳೆಗಾರರು ಮಾರುಕಟ್ಟೆಯ ಹೊರಗೆ ರೇಷ್ಮೆಗೂಡುಗಳನ್ನು ಮಾರಾಟ ಮಾಡುತ್ತಿದ್ದು ನೂಲು ಬಿಚ್ಚಾಣಿಕೆದಾರರು ಸಂಕಷ್ಟ ಎದುರಿಸುವಂತಾಗಿದೆ ಎಂದು ಕಿಡಿಕಾರಿದರು.
ಉಪನಿರ್ದೇಶಕರ ಖಾತೆಗೆ 2 ಸಾವಿರ ರೂ. ಮುಂಗಡ ಪಾವತಿಸಿ ಇ-ಬೀಟ್ ವ್ಯವಸ್ಥೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಉಪನಿರ್ದೇಶಕರ ಖಾತೆಗೆ ಹಣ ಪಾವತಿಸಿದರೂ ಸಹ ನೂಲು ಬಿಚ್ಚಾಣಿಕೆದಾರರ ಮೊಬೈಲ್ಗಳಿಗೆ ಸ್ವೀಕೃತಿಯ ಸಂದೇಶ ಬರುತ್ತಿಲ್ಲ. ಇದರಿಂದಾಗಿ ಆರ್ಥಿಕ ಭದ್ರತೆಯಿಲ್ಲದೆ ನೂಲು ಬಿಚ್ಚಾಣಿಕೆದಾರರು ವಹಿವಾಟು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷಗಳಿಂದ ಹಣ ಸಂದಾಯವಾಗಲು ವಿಳಂಬವಾಗುತ್ತಿದ್ದು, ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇ-ಪೇಮೆಂಟ್ ಜತೆಗೆ ನೇರ ಪಾವತಿಗೆ ವ್ಯವಸ್ಥೆ ಮಾಡುವುದಾಗಿ ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ಮತ್ತು ಸಹಾಯಕ ನಿರ್ದೇಶಕ ನರಸಿಂಹಮೂರ್ತಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ರಾಜ್ಯ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಕಾಯಾಧ್ಯಕ್ಷ ಮೊಹಮ್ಮದ್ ಅನ್ವರ್, ಮೇಲೂರು ಅಜೀಜ್, ಸಿಲ್ಕ್ ೆಡರೇಷನ್ ಮಾಜಿ ಉಪಾಧ್ಯಕ್ಷ ಜಿ.ರೆಹಮಾನ್, ಶಿಡ್ಲಘಟ್ಟ ತಾಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಅಧ್ಯಕ್ಷ ಅನ್ಸರ್ಖಾನ್, ಉಪಾಧ್ಯಕ್ಷ ಆನಂದ್, ರೀಲರ್ಗಳಾದ ಬಾಂಬೆ ನವಾಜ್, ನವೀದ್ಪಾಷ, ಮುನಿರಾಜು (ದಾಮೋದರ) ಇತರರಿದ್ದರು.
ಬ್ಯಾಂಕ್ ಸ್ಥಾಪಿಸಿ: ರಾಜ್ಯದಲ್ಲಿ ಅನೇಕ ಸರ್ಕಾರಿ ರೇಷ್ಮೆ ಮಾರುಕಟ್ಟೆಗಳಲ್ಲಿ ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಿಲ್ಲ ಆದರೆ ಶಿಡ್ಲಘಟ್ಟದಲ್ಲಿ ಮಾತ್ರ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಜಾರಿ ಮಾಡುವ ಮೂಲಕ ನೂಲು ಬಿಚ್ಚಾಣಿಕೆದಾರರನ್ನು ಆರ್ಥಿಕವಾಗಿ ದಿವಾಳಿಯನ್ನಾಗಿಸಲು ಹುನ್ನಾರ ನಡೆಸಿದ್ದಾರೆ ಎಂದು ಕಿಡಿಕಾರಿದ ಪ್ರತಿಭಟನಾನಿತರು, ಮಾರುಕಟ್ಟೆಯಲ್ಲಿ ಬ್ಯಾಂಕ್ ಸ್ಥಾಪಿಸಿ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಿದ ನಂತರವೇ ಇ-ಪೇಮೆಂಟ್ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.