ಲಕ್ಷ್ಮೇಶ್ವರ: ಪ್ರಾಥಮಿಕ ಶಾಲೆ ಶಿಕ್ಷಕರನ್ನು ಚುನಾವಣೆ ವೇಳೆ ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಕ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಅವರನ್ನು ಹೆಚ್ಚುವರಿ ಬಿಎಲ್ಒ ಕೆಲಸದಿಂದ ಮುಕ್ತಗೊಳಿಸಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಸಂಘದಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೆ, ಇದೇ ಸಂದರ್ಭದಲ್ಲಿ ನಾವೂ ಬಿಎಲ್ಒ ಕಾರ್ಯಕ್ಕೆ ಹೋಗುವುದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ತಾ.ಪಂ. ಎದುರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ಈ ವೇಳೆ ಮಾತನಾಡಿದ ತಾಲೂಕು ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪೂರ, ಮತದಾರರ ಪಟ್ಟಿ ಪರಿಷ್ಕ್ಕಣೆ ಸೇರಿ ಚುನಾವಣೆ ಕಾರ್ಯಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸದಿರುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಬರುವ ಎಲ್ಲ ಚುನಾವಣೆ ಕಾರ್ಯಕ್ಕೆ ಶಿಕ್ಷಕರನ್ನು ಬಳಸುವುದರಿಂದ ವಿದ್ಯಾರ್ಥಿಗಳ ಕಲಿಕೆ, ಶಿಕ್ಷಣದ ಗುಣಮಟ್ಟಕ್ಕೆ ಪೆಟ್ಟು ಬೀಳುತ್ತದೆ. ಶಿಕ್ಷಕರೆಲ್ಲರನ್ನೂ ಬಿಎಲ್ಒ ಕೆಲಸದಿಂದ ಮುಕ್ತಿಗೊಳಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ವೇಳೆ ಗ್ರೇಡ್-2 ತಹಸೀಲ್ದಾರ ನಟರಾಜನ್ ಮನವಿ ಸ್ವೀಕರಿಸಿದರು. ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಿ.ಎಚ್.ಪಾಟೀಲ, ಧರ್ಮಪ್ಪ ಲಮಾಣಿ, ಚಂದ್ರಕಾಂತ ನೇಕಾರ, ಬಿ.ಜಿ. ಯತ್ತಿನಹಳ್ಳಿ, ಡಿ.ಡಿ. ಲಮಾಣಿ, ಗೀತಾ ಹಳ್ಯಾಳ, ಎಂ.ಎ. ನದಾಫ್, , ಎಸ್.ಬಿ. ಅಣ್ಣಿಗೇರಿ, ಎ.ಎಂ. ಗುತ್ತಲ, ಆನಂದ ಕ್ಷತ್ರಿಯ, ಎಸ್.ಆರ್. ನದಾಫ್ ಇದ್ದರು.
ಅಂಗನವಾಡಿ ಕಾರ್ಯಕರ್ತೆಯರಿಂದಲೂ ವಿರೋಧ:
ಸರಕಾರದ ಅನೇಕ ಯೋಜನೆಗಳಿಂದ ಅಂಗನವಾಡಿ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಇದೀಗ ಗೃಹಲಕ್ಷ್ಮಿ, ಆರೋಗ್ಯ ಸಮೀಕ್ಷೆ ಸೇರಿ ಇನ್ನೂ ಅನೇಕ ಕೆಲಸ ಕಾರ್ಯಗಳಿಗೆ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸ, ಉಪಚಾರ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮನ್ನೂ ಬಿಎಲ್ಒ ಕೆಲಸದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು. ಆದರೆ, ಇವರ ಆಗ್ರಹ ಹಾಗೂ ಮನವಿಗೆ ಯಾರೂ ಕಿವಿಗೊಡದ್ದರಿಂದ ಬೇಸತ್ತ ಕಾರ್ಯಕರ್ತೆಯರು ಅಲ್ಲಿಂದ ಎದ್ದು ಹೊರನಡೆದರು.