ಮುಂಬೈ: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಇದೀಗ ಸಂಪೂರ್ಣ ಸಾಲಮುಕ್ತವಾಗಿರುವುದಾಗಿ ಶುಕ್ರವಾರ ಘೋಷಿಸಲಾಗಿದೆ. ಕಂಪನಿಯನ್ನು ಸಾಲಮುಕ್ತಗೊಳಿಸಲು ವಿಧಿಸಿಕೊಂಡಿದ್ದ ಗಡವಿನೊಳಗೆ ಈ ಕಾರ್ಯಸಾಧನೆ ಮಾಡಿದ್ದಾಗಿ ಆರ್ಐಎಲ್ ಹೆಮ್ಮೆಪಟ್ಟುಕೊಂಡಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಮುಖೇಶ್ ಅಂಬಾನಿ, 2021ರ ಮಾರ್ಚ್ 31ಕ್ಕೂ ಮುನ್ನ ಕಂಪನಿಯನ್ನು ಸಾಲಮುಕ್ತಗೊಳಿಸುವುದಾಗಿ ಷೇರುದಾರರಿಗೆ ಮಾತುಕೊಟ್ಟಿದೆ. ಆ ಅವಧಿಗಿಂತಲೂ ಮುನ್ನವೇ ಈ ಕಾರ್ಯಸಾಧನೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಲೇಹ್ ಮತ್ತು ಶ್ರೀನಗರ ನೆಲೆಗಳಿಗೆ ಯುದ್ಧವಿಮಾನಗಳನ್ನು ರವಾನಿಸಿದ ಭಾರತ
ವಾಸ್ತವವಾಗಿ 2019ರ ಆಗಸ್ಟ್ 12ರಂದು ನಿಗದಿಯಾಗಿರುವ ಕಂಪನಿಯ 42ನೇ ಸರ್ವಸದಸ್ಯರ ಸಾಮಾನ್ಯ ಸಭೆಗೂ ಮುನ್ನ ಕಂಪನಿಯನ್ನು ಸಾಲಮುಕ್ತಗೊಳಿಸುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದರು.
ಕೇವಲ 58 ದಿನಗಳ ಒಳಗಾಗಿ ಆರ್ಐಎಲ್ ವಿವಿಧ ಹೂಡಿಕೆದಾರರ ಮೂಲಕ 1,68,818 ಕೋಟಿ ರೂ. ಹೂಡಿಕೆಯನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಫೇಸ್ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್. ಮುಬಡಾಲಾ, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್ಟನ್ ಮತ್ತು ಪಿಐಎಫ್ನಂಥ ಜಾಗತಿಕ ಹೂಡಿಕೆದಾರರ ಮೂಲಕ ರಿಲಯನ್ಸ್ ಜಿಯೋ ಪ್ಲಾಟ್ಫಾರಂಗೆ 1,15,693 ಕೋಟಿ ರೂ. ಹೂಡಿಕೆ ಹರಿದುಬಂದಿದ್ದರೆ, ಷೇರುಗಳ ಮಾರಾಟದಿಂದ 53,124.20 ಕೋಟಿ ರೂ. ಬಂಡವಾಳ ಕ್ರೋಢಿಕರಣಗೊಂಡಿದೆ. ಬಿಪಿಗೆ ಮಾರಾಟ ಮಾಡಿರುವ ಷೇರ್ ಅನ್ನು ಲೆಕ್ಕಹಾಕುವುದಾದರೆ ಒಟ್ಟಾರೆ 1.75 ಲಕ್ಷ ಕೋಟಿ ರೂಪಾಯಿ ಬಂಡವಾಳ ಹರಿದುಬಂದಂತಾಗುತ್ತದೆ.