ಬನ್ನೂರು: ಆಹಾರ ಉದ್ಯಮಿಗಳು ನೋಂದಣಿ ಮಾಡಿಕೊಂಡು, ನಂತರ ಉದ್ಯಮ ನಡೆಸಬೇಕು ಎಂದು ಜಿಲ್ಲಾ ಆಹಾರ ಅಧಿಕಾರಿ ಡಾ.ಕಾಂತರಾಜು ತಿಳಿಸಿದರು.
ಪಟ್ಟಣದ ಪುರಸಭಾ ಆವರಣದಲ್ಲಿರುವ ಸಿಡಿಎಸ್ ಭವನದಲ್ಲಿ ಸೋಮವಾರ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಮತ್ತು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕೇಂದ್ರ ಸಹಭಾಗಿತ್ವದಲ್ಲಿ ಆಹಾರ ಉದ್ಯಮಿಗಳಿಗೆ ಪರವಾನಗಿ ನೋಂದಣಿ ಮತ್ತು ಆಹಾರ ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಹಾರ ಕಲಬೆರಕೆ ಪ್ರಮಾಣ ಅಧಿಕವಾಗುತ್ತಿದ್ದು, ಇದರಿಂದ ಹಲವಾರು ಮಾರಣಾಂತಿಕ ಕಾಯಿಲೆಗೆ ಮನುಷ್ಯ ತುತ್ತಾಗುತ್ತಿದ್ದಾನೆ. ಇದರ ಪ್ರಮಾಣ ಕುಗ್ಗಿಸುವಂತ ನಿಟ್ಟಿನಲ್ಲಿ ಆಹಾರ ಉದ್ಯಮಿಗಳಿಗೆ ಪರವಾನಗಿ ನೋಂದಣಿ ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ದಂಡ ಮತ್ತು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಿದರು.
ಕಳೆದ ವಾರ ಸ್ಥಳಿಯ ಪ್ರದೇಶದಿಂದ ಕೇರಳಕ್ಕೆ ಹೋದ ಬೆಲ್ಲ ತಿರಸ್ಕೃತವಾಗಿದ್ದು, ಅದರ ಮೂಲ ನೋಡಿದಾಗ ಅದು ತಿನ್ನಲು ಯೋಗ್ಯವಾಗಿಲ್ಲ ಎಂದು ತಿಳಿದು ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲಾಗಿದೆ. ವ್ಯಾಪಾರಸ್ಥರು ಕಡ್ಡಾಯವಾಗಿ ಪರವಾನಗಿ ಪಡೆದುಕೊಂಡು, ಇಲಾಖಾ ಅಧಿಕಾರಿಗಳಿಗೆ ಸಹಕಾರಿ ನೀಡಿ, ಅವರು ನಿಮ್ಮ ಸ್ಥಳಕ್ಕೆ ಬಂದಾಗ ದಾಖಲೆ ನೀಡಬೇಕು. ಇಲಾಖೆ ವತಿಯಿಂದ ನೀಡಲಾಗುವ ತರಬೇತಿಯಲ್ಲಿ ಭಾಗವಹಿಸಿ, ಪ್ರಮಾಣಪತ್ರ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಆಹಾರ ಸಂಸ್ಥೆಯ ಅಧಿಕಾರಿ ರಶ್ಮಿ ಮಾತನಾಡಿ, ಜನರಿಗೆ ನೀಡುವಂತ ಆಹಾರ ಕಲಬೆರಕೆ ವಸ್ತುಗಳನ್ನು ಹೊಂದಿದ್ದರೆ, ಅದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೆ, 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಆಹಾರ ಸಂರಕ್ಷಕ ಅಧಿಕಾರಿ ಕಾರ್ಯದಲ್ಲಿ ತಡೆ ನೀಡಿದರೆ 3 ತಿಂಗಳ ಸೆರೆವಾಸ ಮತ್ತು 1 ಲಕ್ಷ ರೂ. ದಂಡ ನೀಡಬೇಕಾಗುತ್ತದೆ. ಜಪ್ತಿ ಮಾಡಿದಂತ ವಸ್ತುಗಳಿಗೆ ಹಾನಿ ಮಾಡಿದರೆ 6 ತಿಂಗಳ ಸೆರೆವಾಸ ಮತ್ತು 2 ಲಕ್ಷ ರೂ. ದಂಡ ನೀಡಬೇಕಾಗುತ್ತದೆ. ಆಹಾರ ಸುರಕ್ಷತೆಯ ಕಾನೂನು ಅಡಿಯಲ್ಲಿ ಉತ್ತಮ ರೀತಿಯಲ್ಲಿ ಆಹಾರ ಪದಾರ್ಥವನ್ನು ನೀಡುವ ಮೂಲಕ ಸಹಕರಿಸಬೇಕಿದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ಹೇಮಂತ್ರಾಜ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ, ಯೋಜನಾಧಿಕಾರಿ ಕುಮಾರ್, ಬೆಂಗಳೂರು ಆಹಾರ ಸಂಸ್ಥೆಯ ಅಧಿಕಾರಿ ರಾಘವೇಂದ್ರ ಶೆಟ್ಟಿ, ತಾಲೂಕು ಆಹಾರ ಸಂಸ್ಥೆಯ ಅಧಿಕಾರಿ ಸುಮಂತ್, ಮುಖಂಡ ಸತೀಶ್ನಾಯಕ್, ಕಂಬುನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.