ನವದೆಹಲಿ: ಕೋವಿಡ್-19 ವೈರಸ್ ರೂಪಾಂತರ (ಮ್ಯುಟೇಷನ್) ಆಗುತ್ತಿದೆ, ಅದೇ ಕಾರಣಕ್ಕೆ ಮತ್ತೊಂದು ಅಲೆ ಕಾಣಿಸುತ್ತಿದೆ, ಅದಕ್ಕೇ ಸೋಂಕು ವ್ಯಾಪಿಸುತ್ತಿದೆ ಎಂಬೆಲ್ಲ ಅಭಿಪ್ರಾಯಗಳು ಹರಿದಾಡುತ್ತಿದ್ದು, ಇದೀಗ ಆ ಆತಂಕಗಳನ್ನು ನಿವಾರಿಸುವಂಥ ಹೇಳಿಕೆಯೊಂದು ಆರೋಗ್ಯ ಇಲಾಖೆ ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ‘ಸಂಡೇ ಸಂವಾದ್’ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್ ವೈರಸ್ ರೂಪಾಂತರಗೊಂಡು ಹೆಚ್ಚಿನ ಸೋಂಕುಕಾರಕವಾಗಿ, ಹೆಚ್ಚು ವೇಗವಾಗಿ ಹರಡುವಂತಾಗಿದೆ ಎಂಬುದಕ್ಕೆಲ್ಲ ಸದ್ಯ ಆಧಾರವಿಲ್ಲ. ಅದರಲ್ಲೂ ಪತ್ರಿಕೆಗಳ ಮೂಲಕ ಕರೊನಾ ಹರಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಸದ್ಯ ಕರೊನಾ ಪಿಡುಗಿನ ಈ ಕಾಲದಲ್ಲೂ ಪತ್ರಿಕೆಗಳನ್ನು ಓದುವುದು ಸಂಪೂರ್ಣ ಸುರಕ್ಷಿತ ಎಂದು ಹೇಳಿದ್ದಾರೆ.
ಭಾರತದಲ್ಲಿ ಇನ್ನೂ ಕರೊನಾ ವೈರಸ್ ರೂಪಾಂತರ ಪತ್ತೆಯಾಗಿಲ್ಲ. ಆರನೇ ‘ಸಂಡೇ ಸಂವಾದ್’ ಕಾರ್ಯಕ್ರಮದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತುಂಬ ಪ್ರಶ್ನೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.