ಬೆಂಗಳೂರು: ಮಹಾಮಾರಿ ಕರೊನಾದಿಂದಾಗಿ ರಕ್ತದಾನ ಶಿಬಿರಗಳು ನಡೆಯದಿರುವ ಹಿನ್ನೆಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ರಕ್ತನಿಧಿಯಲ್ಲಿ ರಕ್ತದ ಕೊರತೆ ಎದುರಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಹೆಚ್ಚು ಬೇಡಿಕೆ ಬರಲಾರಂಭಿಸಿದೆ.
ದೇಹದಲ್ಲಿ ಗುಣಮಟ್ಟದ ರಕ್ತ ಉತ್ಪತ್ತಿಯಾಗದಿರುವ ತಲಸ್ಸೆಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ 15 ದಿನಗಳಿಗೊಮ್ಮೆ ರಕ್ತ ನೀಡಬೇಕಾದ ಅಗತ್ಯವಿರುತ್ತದೆ. ಇಂತಹ ಮಕ್ಕಳ ಆರೈಕೆಗಾಗಿ ಪರಿಷತ್ನಿಂದ ‘ಸಂರಕ್ಷಾ’ ಆರೈಕೆ ಕೇಂದ್ರವು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಆರೈಕೆ ಕೇಂದ್ರದಲ್ಲಿ ಇದೀಗ 500ಕ್ಕೂ ಹೆಚ್ಚು ಮಕ್ಕಳು ಉಚಿತವಾಗಿ ಆರೈಕೆ ಪಡೆಯುತ್ತಿದ್ದು, ಕರೊನಾದಿಂದಾಗಿ ರಕ್ತ ಪೂರೈಸುವುದು ಕಷ್ಟವಾಗುತ್ತಿದೆ. ಆದ್ದರಿಂದ, ಸಾರ್ವಜನಿಕರು ಖುದ್ದಾಗಿ ಪರಿಷತ್ನ ರಕ್ತ ಕೇಂದ್ರಕ್ಕೆ ಆಗಮಿಸಿ ರಕ್ತದಾನ ಮಾಡುವಂತೆ ಹಾಗೂ ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುವಂತೆ ಪರಿಷತ್ ಮನವಿ ಮಾಡಿದೆ. ವಿವರಕ್ಕಾಗಿ ದೂ:080-26608870, 29747870ಕ್ಕೆ ಸಂಪರ್ಕಿಸಿ.