ಹೈದರಾಬಾದ್:ಸಿನಿತಾರೆಯರ ನಡುವೆ ಸಿನಿಮಾದಲ್ಲಿ ನಟನೆ ಮುಗಿಸಿದ ನಂತರವೂ ಉತ್ತಮ ಬಾಂಧವ್ಯ ಇರುತ್ತೆ. ತಮ್ಮ ಸಹನಟರನ್ನು, ಸ್ನೇಹಿತರನ್ನು ಭೇಟಿ ಮಾಡಿದಾಗ ಒಟ್ಟಿಗೆ ಊಟ ಮಾಡುವುದು ಮತ್ತು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸಿಕೊಳ್ಳುವುದು ಸಹಜ. ಇನ್ನು, ಬಾಲಿವುಡ್ ಮತ್ತು ಸೌತ್ ಸಿನಿತಾರೆಯರ ನಂಟು ಸಿಕ್ಕಾಪಟ್ಟೆ ಗಟ್ಟಿಯಾಗಿದೆ. ಬಾಲಿವುಡ್ ತಾರೆಯರು ಸೌತ್ನಲ್ಲಿ ನಟಿಸುವುದು, ಸೌತ್ ಸಿನಿತಾರೆಯರು ಬಾಲಿವುಡ್ ನಲ್ಲಿ ನಟಿಸುವುದು, ಸಿನಿಮಾಗಳನ್ನು ಡಬ್ಬಿಂಗ್ ಮಾಡುವುದು ಸಹ ತುಂಬಾ ಸಾಮಾನ್ಯವಾಗಿದೆ. ಈ ಸ್ನೇಹದಲ್ಲಿಯೇ ಬಾಲಿವುಡ್ ನಟರೊಬ್ಬರಿಗೆ ಟಾಲಿವುಡ್ ಮೆಗಾ ಕುಟುಂಬದಿಂದ ಹೈದರಾಬಾದಿ ಬಿರಿಯಾನಿಯ ಭರ್ಜರಿ ಊಟದ ಟ್ರೀಟ್ ಸಿಕ್ಕಿದೆ.
ಹೌದು, ಬಿರಿಯಾನಿ ಎಂದ ತಕ್ಷಣ ಮೊದಲು ನೆನಪಾಗುವುದು ಹೈದರಾಬಾದಿ ಬಿರಿಯಾನಿ. ಅಂತಹದ್ದು, ಮೆಗಾ ಕುಟುಂಬದ ಹೈದರಾಬಾದಿ ಬಿರಿಯಾನಿ ಎಂದರೆ ಮಾತೇ? ಅಂದಹಾಗೆ, ಒಂದು ಜಾಹೀರಾತಿನ ಚಿತ್ರೀಕರಣಕ್ಕೆಂದು ಬಾಲಿವುಡ್ ನಟ ರಣವೀರ್ ಸಿಂಗ್ ಹೈದರಾಬಾದ್ನಲ್ಲಿ ಇದ್ದಾರೆ. ಈ ಜಾಹೀರಾತಿನಲ್ಲಿ ನಟ ರಣವೀರ್ ಸಿಂಗ್ ಮೆಗಾ ಕುಟುಂಬದ ಸ್ಟಾರ್ ನಟ ರಾಮ್ ಚರಣ್ ತೇಜ್ ಜೊತೆಗೆ ಕಾಣಿಸಿಲಿದ್ದಾರೆ. ಹೀಗಾಗಿ, ಶೂಟಿಂಗ್ ಸಂರ್ದಭದಲ್ಲಿ ತಮ್ಮ ಮನೆಯ ಹೈದರಾಬಾದಿ ಬಿರಿಯಾನಿಯ ರುಚಿ ನಟ ರಣವೀರ್ ಸಿಂಗ್ಗೆ ತೋರಿಸಿದ್ದಾರೆ ರಾಮ್ ಚರಣ್. ಇನ್ನು, ಮೆಗಾ ಕುಟುಂಬದ ಬಿರಿಯಾನಿ ಸವಿದ ನಟ ರಣವೀರ್ ಸಿಂಗ್ ”ಅಬ್ಬಬ್ಬಾ, ವ್ಹಾ” ಎಂದಿದ್ದಾರಂತೆ.
ಜೊತೆಗೆ, ಜಾಹೀರಾತಿಗೆ ಅಥವಾ ಬಿರಿಯಾನಿಗೆ ಮಾತ್ರ ಸೀಮಿತವಾಗಿಲ್ಲ ರಣವೀರ್ ಮತ್ತು ರಾಮ್ ಚರಣ್ ತೇಜ್ ಅನುಬಂಧ. ಇವರಿಬ್ಬರು ಒಂದು ಸಿನಿಮಾದಲ್ಲಿ ಕೂಡ ಒಟ್ಟಿಗೆ ನಟಿಸಲಿದ್ದಾರೆ. ಹೌದು, ನಟ ರಾಮ್ ಚರಣ್ ತೇಜ್ ಅವರ 15ನೇ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಒಂದು ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರವನ್ನು ಶಂಕರ್ ಅವರು ನಿರ್ದೇಶಿಸುತ್ತಿರುವುದು ಸಹ ಮತ್ತೊಂದು ವಿಶೇಷ. ಇದೇ ಚಿತ್ರದ ಮುಹೂರ್ತಕ್ಕಾಗಿ ಈ ಹಿಂದೆಯೇ ಒಮ್ಮೆ ರಣವೀರ್ ಸಿಂಗ್ ಹೈದರಾಬಾದ್ಗೆ ಭೇಟಿ ನೀಡಿದ್ದು, ರಮ್ ಚರಣ್ ಸಿಂಗ್ ಅವರ ಹೊಚ್ಚ ಹೊಸ ಫೆರಾರಿ ಕಾರಿನ ಮೇಲೆ ಕೂತು ಹಿಡಿಸಿಕೊಂಡ ಫೋಟೋಗಳು ಸಖತ್ ವೈರಲ್ ಆಗಿದ್ದವು.
ಇನ್ನು ಹೇಳಬೇಕೆಂದರೆ, ನಟ ರಾಮ್ ಚರಣ್ ತೇಜ್ ಬಾಲಿವುಡ್ನ ಭಾಯ್ ನಟ ಸಲ್ಮಾನ್ ಖಾನ್ಗೂ ಹೈದರಾಬಾದ್ ಬಿರಿಯಾನಿ ತಿನಿಸಿದ್ದಾರೆ. ಸಲ್ಮಾನ್ ಖಾನ್ ಹೈದರಾಬಾದ್ಗೆ ಹೋದ ಪ್ರತಿ ಬಾರಿ ರಾಮ್ ಚರಣ್ ತೇಜ್ ಅವರ ಮನೆಯಿಂದಲೇ ಹೈದರಾಬಾದ್ ಬಿರಿಯಾನಿಯ ಬಾಕ್ಸ್ ಪಾರ್ಸೆಲ್ ಮಾಡಲಾಗುತ್ತಂತೆ. ಹೈದರಾಬಾದ್ ಬಿರಿಯಾನಿ ತಿಂದು ಸಖತ್ ಖುಷಿಯಾಗುತ್ತಾರಂತೆ ಸಲ್ಮಾನ್ ಖಾನ್. ಇದಿಷ್ಟು ಸಾಕು, ಹೈದರಾಬಾದ್ ಬಿರಿಯಾನಿಯ ವಿಶೇಷತೆ ಏನು ಅಂತ ತಿಳಿಸಲು.