ರಾಣೆಬೆನ್ನೂರ: ಹರಿದ್ವಾರದ ಪತಂಜಲಿ ಯೋಗ ಪೀಠದ ಮಾರ್ಗದರ್ಶನದಲ್ಲಿ ನ. 26ರಂದು ಬೆಳಗ್ಗೆ 9 ಗಂಟೆಗೆ ಇಲ್ಲಿಯ ಸಿದ್ದೇಶ್ವರ ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಪತಂಜಲಿ ಮಹಿಳಾ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಯೋಗ ಗುರು ಭವರಲಾಲ್ ಆರ್ಯ ತಿಳಿಸಿದರು.
ಧಾರವಾಡ ನಗರದ ಮದಿಹಾಳದ ಜೋಶಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ಯೋಗಾಭ್ಯಾಸ ಹಾಗೂ ಮಹಿಳಾ ಮಹಾ ಸಮ್ಮೇಳನದ ಪೂರ್ವಭಾವಿ ಸಿದ್ಧತೆಗಳ ಕುರಿತು ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಉತ್ತರ ಕರ್ನಾಟಕದ ಪತಂಜಲಿ ಮಹಿಳಾ ಯೋಗ ಶಿಕ್ಷಕರ ಒಂದು ದಿನದ ವಿಶೇಷ ಕಾರ್ಯಾಗಾರ ಸಮ್ಮೇಳನದಲ್ಲಿ ಜರುಗಲಿದೆ. ಪತಂಜಲಿ ಯೋಗ ಪೀಠದ ಮುಖ್ಯ ಕೇಂದ್ರೀಯ ಪ್ರಭಾರಿ ಸಾಧ್ವಿ ಡಾ. ದೇವಪ್ರಿಯಾಜಿ ಪಾಲ್ಗೊಳ್ಳಿದ್ದಾರೆ. ನಿತ್ಯ ಜೀವನದಲ್ಲಿ ಯೋಗದ ಮಹತ್ವ, ರೋಗಾನುಸಾರ ಯೋಗ, ಭಾರತೀಯ ಚಿಕಿತ್ಸಾ ಪದ್ಧತಿಗಳ ಪರಿಚಯ, ಆದರ್ಶ ಜೀವನ ಪದ್ಧತಿ, ಆಹಾರ ಚಿಕಿತ್ಸೆ, ಜಲ ಚಿಕಿತ್ಸೆ, ಪ್ರಾಕೃತಿಕ ಚಿಕಿತ್ಸೆಗಳ ಮಾಹಿತಿ, ಆಯುರ್ವೇದ, ಸ್ವದೇಶಿ, ಗುರುಕುಲ ಪದ್ಧತಿ ಶಿಕ್ಷಣ, ರಾಷ್ಟ್ರ ಸೇವೆಯಲ್ಲಿ ಮಹಿಳೆಯರ ಪಾತ್ರ ಮುಂತಾದ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ.
ಯೋಗ ಗುರು ಸ್ವಾಮಿ ರಾಮದೇವ ಜಿ ಮಹಾರಾಜ್ ವಿಡಿಯೋ ಕಾನ್ಫರೆರ್ಸ್ ಮೂಲಕ ವೈಜ್ಞಾನಿಕವಾಗಿ ಪತಂಜಲಿ ರಿಸರ್ಚ್ ಫೌಂಡೇಶನ್ನಲ್ಲಿ ಕೈಗೊಂಡ ಸಂಶೋಧನೆಗಳ ಮೂಲಕ ಯೋಗ, ಆಯುರ್ವೇದ, ಪ್ರಾಕೃತಿಕ ಚಿಕಿತ್ಸೆ ಮೂಲಕ ಸಾಮಾನ್ಯ ಖಾಯಿಲೆಗಳಿಂದ ಹಿಡಿದು ಗಂಭೀರ ಖಾಯಿಲೆಗಳನ್ನು ನಿವಾರಣೆ ಮಾಡಿರುವ ಸಾಕ್ಷ್ಯಾಧಾರಿತ ವಿಧಿ ವಿಧಾನಗಳ ಬಗ್ಗೆ ತಿಳಿಸಲಿದ್ದಾರೆ.
ಸಮ್ಮೇಳನದಲ್ಲಿ ಹುಬ್ಬಳ್ಳಿ-ಧಾರವಾಡದಿಂದ 1500ಕ್ಕೂ ಅಧಿಕ ಮತ್ತು ಉತ್ತರ ಕರ್ನಾಟಕದಿಂದ 5000ಕ್ಕೂ ಅಧಿಕ ಮಹಿಳಾ ಯೋಗ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಯೋಗ ಸಮಿತಿಯ ಪ್ರಮುಖರಾದ ರಮೇಶ ಸುಲಾಖೆ, ಉಮಾ ಅಗಡಿ, ಎಂ.ಡಿ. ಪಾಟೀಲ, ಶೈಲಜಾ ಮಾಡಿಕರ, ಲೀಲಾವತಿ ಸಾಂಬ್ರಾಣಿ, ರೂಪಾ, ಲಕ್ಷ್ಮೀ ಬಡಿಗೇರ, ನಾಗರಾಜ, ಮಂಜುನಾಥ, ಪ್ರವೀಣ, ರಾಜಶೇಖರ, ಕೃಷ್ಣಾ, ಸೋಮನಾಥ ಮತ್ತಿತರರು ಪಾಲ್ಗೊಂಡಿದ್ದರು.