ರಾಣೆಬೆನ್ನೂರ: ಜೀವ ಉಳಿಸಬಲ್ಲ ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದೆ ಎಂದು ಹೆಸ್ಕಾಂ ವಿಭಾಗಾಧಿಕಾರಿ ಎನ್.ಸಿ. ಬೆಳಕೇರಿ ಹೇಳಿದರು.
ನಗರದ ಕೆಇಬಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿ ಗುರುವಾರ ಸ್ಥಳೀಯ ಹೆಸ್ಕಾಂ ಹಾಗೂ ರಾಣೆಬೆನ್ನೂರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ವಿಶ್ವ ಪರಿಸರ ದಿನ ಹಾಗೂ ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯ ವೈಜ್ಞಾನಿಕವಾಗಿ ಬಹಳಷ್ಟು ಪ್ರಗತಿ ಸಾಧಿಸಿದ್ದರೂ ಈವರೆಗೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗಿಲ್ಲ. ಆದ್ದರಿಂದ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗೆ ಅಗತ್ಯವಾಗಿರುವ ರಕ್ತವನ್ನು ದಾನಿಗಳಿಂದಲೇ ಪಡೆಯಬೇಕಾಗಿದೆ. ಹೀಗಾಗಿ 18ರಿಂದ 60 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ಪ್ರಸಾದ ಆರ್., ಎಸ್.ಬಿ. ಹೊಳೆಯಣ್ಣನವರ, ಪಿ.ಎಸ್. ಸುಲಾಖೆ, ಎಚ್.ಎಸ್. ಬಸವರಾಜಯ್ಯ, ಪ್ರಶಾಂತ ಎಸ್.ಪಿ., ಬೀರಪ್ಪ ತಿಪ್ಪಣ್ಣನವರ, ಉಮೇಶ ಹನುಮನಾಳ, ಹನುಮಂತ ರಣಸೂತ, ಎಂ.ಪಿ. ರಾಜೀವ, ಪ್ರಶಾಂತ ಬಿಶೆಟ್ಟಿ, ಸಂತೋಷ ನೆಲ್ಲಿಕೊಪ್ಪ, ವಿಶ್ವನಾಥ ದಾಸರ ಮತ್ತಿತರರು ಉಪಸ್ಥಿತರಿದ್ದರು.