ರಾಣೆಬೆನ್ನೂರ: ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಸಿಎಂ ಬಸವರಾಜ ಬೊಮ್ಮಾಯಿಯವರು ತರಾತುರಿಯಲ್ಲಿ ಸದಾಶಿವ ಆಯೋಗ ಜಾರಿ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿ ಬಂಜಾರ ಸಮುದಾಯದವರು ನಗರದ ಸೇವಾಲಾಲ ದೇವಸ್ಥಾನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಸಮಾಜದ ಹಿರಿಯ ಮುಖಂಡ ರಾಮಣ್ಣ ಲಮಾಣಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ಅವಕಾಶವಿಲ್ಲ. ಆದರೂ ಸಿಎಂ ಬಸವರಾಜ ಬೊಮ್ಮಾಯಿಯವರು ರಾಜಕೀಯ ಲಾಭಕ್ಕಾಗಿ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡಿರುವುದು ಖಂಡನೀಯವಾಗಿದೆ. ರಾಜ್ಯದಲ್ಲಿ ಬಂಜಾರ ಸಮಾಜದವರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಎಡಗೈ ಬಲಗೈ ಎನ್ನದೆ ಎಲ್ಲರೂ ಒಗ್ಗೂಡಿ ಜೀವನ ನಡೆಸುತ್ತಿದ್ದೇವೆ. ಆದರೆ, ಮುಖ್ಯಮಂತ್ರಿಯವರು ಮಾಡಿದ ಆದೇಶದಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಆದ್ದರಿಂದ ಮೀಸಲಾತಿ ವಿಚಾರದಲ್ಲಿ ಮೊದಲು ಹೇಗೆ ಇದೆ. ಅದೇ ರೀತಿ ಮುಂದುವರಿಸಬೇಕು. ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಸಿಎಂ ಅವರು ಕ್ರಮ ಕೈಗೊಳ್ಳದಿದ್ದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು. ತಹಸೀಲ್ದಾರ್ ಗುರುಬಸವರಾಜ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರಮುಖರಾದ ಡಾಕೇಶ ಲಮಾಣಿ, ವಸಂತ ಲಮಾಣಿ, ಚಂದ್ರಣ್ಣ ಲಮಾಣಿ, ಶಿವಪ್ಪ ಲಮಾಣಿ, ಹಾಲಪ್ಪ ಲಮಾಣಿ, ತೇಜಪ್ಪ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.