ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಬಳ್ಳಾರಿ ಮೂಲದ ರಣಧೀರ್ ನಾಯಕ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಸಿನಿಮಾ “ರಾಜರಾಣಿ’. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಟಿ ಅದ್ವಿತಿ ಶೆಟ್ಟಿ, “ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಹೊಸಬರ ಸಿನಿಮಾ ಅಂತನ್ನಿಸುವುದಿಲ್ಲ. ನಾನು ಕೂಡ ಚಿತ್ರರಂಗಕ್ಕೆ ಬಂದಾಗ ಹೊಸಬಳಾಗಿದ್ದೆ. ಇತ್ತೀಚೆಗಷ್ಟೆ ನಾನು ನಟಿಸಿರುವ “ಧೀರಸಾಮ್ರಾಟ್’ ಚಿತ್ರ 25 ದಿನ ಪೂರೈಸಿದೆ. ಅದರಂತೆಯೇ “ರಾಜರಾಣಿ’ ಕೂಡ ಯಶಸ್ಸುಗಳಿಸಲಿ’ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.
ನಿರ್ದೇಶಕ ರಣಧೀರ್, “”ಪುದಿಯವರುಗಳ್’ ಎಂಬ ತಮಿಳು ಚಿತ್ರಕ್ಕೆ ನಾಯಕನಾಗಿ ಅವಕಾಶ ಬಂದಿತ್ತು. ನಂತರ ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದೆ. ಆ ಅನುಭವದೊಂದಿಗೆ ಈ ಚಿತ್ರ ಮಾಡಿದ್ದೇನೆ. ಅನಾಥನಾಗಿದ್ದ ನಾಯಕನಿಗೆ ಆತನ ಅಜ್ಜಿ ಯಾವಾಗಲೂ ನಿನಗೆ ರಾಣಿ ಸಿಗುತ್ತಾಳೆ, ಅವಳ ಮೂಲಕ ನಿನಗೆ ಎಲ್ಲವೂ ಸಿಗುತ್ತದೆ ಎಂದು ಹೇಳುತ್ತಿರುತ್ತಾಳೆ. ಅದರಂತೆ ಕಥೆಯೂ ರಾಣಿಯ ಸುತ್ತ ಸಾಗುತ್ತದೆ’ ಎಂದು ಮಾಹಿತಿ ನೀಡಿದರು.
ಮಂಡ್ಯ ಮೂಲದ ರಿತನ್ಯ ಶೆಟ್ಟಿ ರಣಧೀರ್ಗೆ ನಾಯಕಿಯಾಗಿದ್ದು, ಜೀವನ್, ಗಿರಿಜಾ ಲೋಕೇಶ್, ಶೋಭರಾಜ್, ಬಿರಾದಾರ್, ಕಿಲ್ಲರ್ ವೆಂಕಟೇಶ್ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಪ್ರಕಾಶ್ ಸಂಗೀತ, ಮಧು ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ಹಾಗೂ ನಿಶೀತ್ ಸಂಕಲನವಿರಲಿದೆ. ಬೆಂಗಳೂರು, ಮಂಗಳೂರು, ಮಾಲೂರು, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಸುತ್ತಮುತ್ತ 75 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ.