ಬೆಳಗಾವಿ: ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಸತ್ಯಾಸತ್ಯತೆ ಬಯಲಿಗೆಳೆಯಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಜಾತ್ಯತೀತ ಮಹಿಳಾ ರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗುರುವಾರ ಪ್ರತಿಭಟನೆ ನಡೆಸಿದರು. ನಂತರ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಹಾಳು ಮಾಡುವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ರಮೇಶ ವಿರುದ್ಧ ದೂರು ನೀಡಿರುವ ದಿನೇಶ ಕಲ್ಲಹಳ್ಳಿ ಹಾಗೂ ಯುವತಿ ಕುಟುಂಬಕ್ಕೆ ರಕ್ಷಣೆ ನೀಡಬೇಕು. ದಿನೇಶ ವಿರುದ್ಧ ಕೇಸ್ ದಾಖಲಿಸಿ ವಿಚಾರಣೆ ನೆಪದಲ್ಲಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಆದ್ದರಿಂದ, ತನಿಖೆ ನಡೆಸಿ, ಯುವತಿಗೆ ನ್ಯಾಯ ಒದಗಿಸಬೇಕು. ರಮೇಶ ಜಾರಕಿಹೊಳಿ ಬೆಂಬಲಿಗರು ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ. ಹಾನಿ ಮಾಡಿದವರಿಂದ ನಷ್ಟ ಭರಿಸಿಕೊಳ್ಳಬೇಕು ಎಂದು ಆಗ್ರಹಿಸಿರು.
ಯುವತಿಯೊಂದಿಗೆ ಮಾತನಾಡುವ ಖಾಸಗಿ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭ್ರಷ್ಟ ಎಂದು ಆರೋಪಿಸಿದ್ದಲ್ಲದೆ, ಕನ್ನಡಿಗರು ಮತ್ತು ಮಾಧ್ಯಮದವರನ್ನು ಅವ್ಯಾಚ ಶಬ್ದಗಳಿಂದ ರಮೇಶ ನಿಂದಿಸಿದ್ದಾರೆ. ಈ ಹೇಳಿಕೆಯ ದೃಶ್ಯಾವಳಿ ಸಾಕ್ಷಿಯೆಂದು ಪರಿಗಣಿಸಿ, ತನಿಖೆ ನಡೆಸಬೇಕು. ಅಧಿಕಾರ ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ರಮೇಶರನ್ನು ಶಾಶ್ವತವಾಗಿ ರಾಜಕೀಯದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆ ಅಧ್ಯಕ್ಷೆ ಕನ್ನಡತಿ ರತ್ನಾ, ಯಶೋಧಾ ಪಾಟೀಲ, ಲಕ್ಷ್ಮೀ ದೊಡ್ಡಮನಿ, ಸಂಗೀತಾ ಸೇರಿದಂತೆ ಇನ್ನಿತರರಿದ್ದರು.