ನವದೆಹಲಿ: ಅಯೋಧ್ಯೆಯಲ್ಲಿ ಭೂ ನೋಂದಣಿ ಶೇ. 109 ಏರಿಕೆ ಕಂಡಿದ್ದು, ಇಲ್ಲಿನ ಭೂಮಿಗೆ ಈಗ ಬಂಗಾರದ ಬೆಲೆ ಬಂದಿದೆ. ಭವ್ಯ ರಾಮ ಮಂದಿರ ಉದ್ಘಾಟನೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಇಲ್ಲಿನ ಭೂಮಿಗೆ ಭಾರಿ ಬೇಡಿಕೆ ಬರುತ್ತಿದೆ.
ದೇವಸ್ಥಾನದ 3 ಕಿಮೀ ವ್ಯಾಪ್ತಿಯಲ್ಲಿ ಪ್ರತಿ ಚದರ ಅಡಿಗೆ ರೂ.3,000 ರಿಂದ ರೂ.15,000 ವರೆಗೆ ದರ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಈ ಬೆಲೆ ಪ್ರತಿ ಚದರ ಅಡಿಗೆ ರೂ.25,000ಗೆ ಏರಬಹುದು ಎಂದು ಸ್ಥಳಿಯ ರಿಯಲ್ ಎಸ್ಟೇಟ್ ಉದ್ಯಮಿಗಳು ಅಂದಾಜಿಸಿದ್ದಾರೆ.
2017-18ರ ಸಾಲಿನಲ್ಲಿ ಅಯೋಧ್ಯೆಯಲ್ಲಿ 5,962 ಭೂ ವಹಿವಾಟುಗಳನ್ನು ನೋಂದಾಯಿಸಲಾಗಿತ್ತು. 2019ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಬೆಲೆ ನಿರಂತರವಾಗಿ ಏರುತ್ತಿದೆ. ಕೆಲ ದಿನಗಳಲ್ಲಿ ಶೇ. 15-20% ದರ ಏರಿಕೆ ಆಗಿದೆ. 2023ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಅಯೋಧ್ಯೆಯಲ್ಲಿ 29,325 ಮಾರಾಟ ಪತ್ರಗಳನ್ನು ನೋಂದಾಯಿಸಲಾಗಿದೆ. ಸದರ್ ಉಪನೋಂದಣಿ ಕಚೇರಿಯೊಂದರಲ್ಲೆ 10,479 ಭೂ ವ್ಯವಹಾರ ದಾಖಲಾಗಿದೆ. ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮಗಳ ತ್ವರಿತ ಬೆಳವಣಿಗೆ ಕಾಣುತ್ತಿದೆ. ಇದು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಹೆಚ್ಚಿನ ಭೂ ಖರೀದಿ ವಾಣಿಜ್ಯ ಉದ್ದೇಶದಿಂದ ನಡೆದಿದೆ.
32,000 ಕೋಟಿ ರೂ. ಯೋಜನೆ
ಹೆದ್ದಾರಿಗಳು, ರಸ್ತೆಗಳು, ಮೂಲಸೌಕರ್ಯ, ಟೌನ್ಶಿಪ್, ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರ ಸೇರಿ ಸುಮಾರು 32,000 ಕೋಟಿ ರೂ. ಮೌಲ್ಯದ 264 ಯೋಜನೆಗಳು ಈಗಾಗಲೇ ಅಯೋಧ್ಯೆಯಲ್ಲಿ ನಡೆಯುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳು ಚಾಲ್ತಿಯಲ್ಲಿವೆ. ಸರ್ಕಾರ ಕೂಡ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಿಸಿದೆ. ಪ್ರಸಿದ್ಧ ಹೋಟೆಲ್ಗಳು ಕೂಡ ಈಗ ಅಯೋಧ್ಯೆಯತ್ತ ಮುಖ ಮಾಡಿದ್ದು, ಹೊಸ ಅತಿಥಿ ಗೃಹ ನಿರ್ಮಾಣಕ್ಕೆ ಭೂಮಿ ಖರೀದಿ ಮಾಡುತ್ತಿವೆ.