ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ (Supreme Court) ಶುಕ್ರವಾರ (ನ.11) ಆದೇಶ ಹೊರಡಿಸಿದೆ.
ಪ್ರಕರಣದ ಎಲ್ಲ ಏಳು ಹಂತಕರನ್ನು ಬಿಡಗಡೆ ಮಾಡಬೇಕೆಂದು ತಮಿಳುನಾಡು (Tamil Nadu) ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ರಾಜ್ಯಪಾಲರು ಸಹ ಇದಕ್ಕೆ ಒಪ್ಪಿಗೆ ನೀಡಿದ್ದರು. ಇದರ ಆಧಾರದ ಮೇಲೆ ಹಂತಕರನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಹಂತಕಿ ನಳಿನಿ ಶ್ರೀಹರನ್ ಸೇರಿದಂತೆ ಆರು ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಸುಪ್ರೀಂಕೋರ್ಟ್ ತೀರ್ಪಿನಿಂದ ನಿರಾಳರಾಗಿದ್ದಾರೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ (B R Gavai)ಮತ್ತು ಬಿವಿ ನಾಗರತ್ನ (B V Nagarathna) ಅವರನ್ನೊಳಗೊಂಡ ನ್ಯಾಯಪೀಠವು ಆದೇಶ ಹೊರಡಿಸಿದ್ದು, ಅಪರಾಧಿಗಳಾದ ನಳಿನಿ, ಸಂತನ್, ಮುರುಗನ್, ಶ್ರೀಹರನ್, ರಾಬರ್ಟ್ ಪಯಸ್ ಮತ್ತು ರವಿಚಂದ್ರನ್ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಕಳೆದ ಮೇ 18ರಲ್ಲಿ ಮತ್ತೊಬ್ಬ ಆರೋಪಿ ಪೆರಾರಿವಾಲನ್ (Perarivalan)ನನ್ನು ಸುಪ್ರೀಂಕೋರ್ಟ್ ಬಿಡುಗಡೆ ಮಾಡಿತ್ತು.
ಈ ಹಿಂದೆ ಪೆರಾರಿವಾಲನ್ ಅವರ ಮನವಿಯನ್ನು ಕೇಂದ್ರ ಸರ್ಕಾರ ವಿರೋಧಿಸಿತ್ತು. ಬಿಡುಗಡೆ ಮಾಡುವ ವಿಚಾರವನ್ನು ತಮಿಳುನಾಡು ರಾಜ್ಯಪಾಲರು ಆಗಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ತಿಳಿಸಿದ್ದಾರೆ. ಈ ಬಗ್ಗೆ ರಾಷ್ಟ್ರಪತಿಗಳು ಇನ್ನು ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಕೋರ್ಟ್ ಪ್ರಕರಣದ ವಿಳಂಬ ಮತ್ತು ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿತ್ತು. ಅಲ್ಲದೆ, ಪ್ರಕರಣದ ಎಲ್ಲಾ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವ ತಮಿಳುನಾಡು ಕ್ಯಾಬಿನೆಟ್ ನಿರ್ಧಾರಕ್ಕೆ ರಾಜ್ಯಪಾಲರು ಕೂಡ ಬದ್ಧರಾಗಿದ್ದಾರೆ ಮತ್ತು ಸಂವಿಧಾನದ ಸೆಕ್ಷನ್ 161 ರ ಅಡಿಯಲ್ಲಿ ಕ್ಷಮಾದಾನವನ್ನು ನೀಡಿರುತ್ತಾರೆ. ರಾಜ್ಯಪಾಲರು ಕ್ಷಮಾಧಾನ ಕಡತವನ್ನು ರಾಷ್ಟ್ರಪತಿ ಕಚೇರಿಗೆ ರವಾನಿಸಿದ್ದರೂ ಅದು ರಾಷ್ಟ್ರಪತಿಗಳ ಪ್ರತಿಕ್ರಿಯೆಗೆ ಕಾಯುವುದಿಲ್ಲ ಎಂದು ಕೋರ್ಟ್ ಹೇಳಿತ್ತು. ಕ್ಷಮಾದಾನದ ಪ್ರಕರಣಗಳಲ್ಲಿ ರಾಷ್ಟ್ರಪತಿಗಳಿಗೆ ಮಾತ್ರ ವಿಶೇಷ ಅಧಿಕಾರವಿರುತ್ತದೆ ಎಂಬ ಕೇಂದ್ರದ ವಾದದ ವಿರುದ್ಧ ನ್ಯಾಯಾಲಯ ವಾಗ್ದಾಳಿ ನಡೆಸಿತು. ಹಾಗಾದರೆ, ಈ ಎಲ್ಲಾ ವರ್ಷಗಳಲ್ಲಿ ರಾಜ್ಯಪಾಲರು ನೀಡಿದ ಕ್ಷಮಾಧಾನವು ಅಸಂವಿಧಾನಿಕ ಎಂದರ್ಥವೇ ಎಂದು ನ್ಯಾಯಾಲಯ ಹೇಳಿ, ಕೇಂದ್ರ ಕ್ರಮವನ್ನು ಟೀಕಿಸಿತ್ತು.
1991, ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದುರ್ನಲ್ಲಿ ಮಹಿಳೆಯೊಬ್ಬಳು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿ ಹತರಾದರು. ಅಲ್ಲದೆ, ಇತರೆ 21 ಮಂದಿಯು ಕೂಡ ಪ್ರಾಣ ಕಳೆದುಕೊಂಡರು. ಈ ದಾಳಿಯ ಹಿಂದೆ ಎಲ್ಟಿಟಿಇ ಸಂಘಟನೆ ಕೈವಾಡ ಇತ್ತು. ಈ ಪ್ರಕರಣದಲ್ಲಿ 7 ಮಂದಿಯನ್ನು ಬಂಧಿಸಿ, ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
Supreme Court directs release of six accused including Nalini and RP Ravichandran, serving life imprisonment in connection with the assassination of former Prime Minister Rajiv Gandhi. pic.twitter.com/nguZY99Svc
— ANI (@ANI) November 11, 2022
31 ವರ್ಷ ಜೈಲು ಶಿಕ್ಷೆ ಬಳಿಕ ರಾಜೀವ್ ಗಾಂಧಿ ಹತ್ಯೆ ಆರೋಪಿ ಪೆರಾರಿವಾಲನ್ ಬಿಡುಗಡೆಗೊಳಿಸಿದ ಸುಪ್ರೀಂಕೊರ್ಟ್