ಕೊಕಟನೂರ: ಅಥಣಿ ತಾಲೂಕಿನ ಪೂರ್ವ ಭಾಗದ ಗ್ರಾಮಗಳಲ್ಲಿ ಭಾನುವಾರ ಸಂಜೆ ಹಾಗೂ ರಾತ್ರಿ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದೆ.
ಅಡಹಳ್ಳಿ ಗ್ರಾಮದ ದಾನಗೌಡ ಪಾಟೀಲ ಅವರಿಗೆ ಸೇರಿದ ಮನೆಯ ಛಾವಣಿ ಸಮೇತ ಪತ್ರಾಸ್ ಹಾರಿ ಹೋಗಿದ್ದು ಆಹಾರ ಧಾನ್ಯ ಹಾಗೂ ಗೃಹೋಪಯೋಗಿ ಸಲಕರಣೆಗಳು ನಾಶವಾಗಿವೆ.
ಶಮಸುದ್ದೀನ್ ಮುಲ್ಲಾ, ಭೀಮು ಅಥಣಿ, ಗಂಗವ್ವ ತೇಲಿ, ರಮೇಶ ಖೋಬ್ರಿ ಸೇರಿದಂತೆ ಹಲವರ ಮನೆ ಛಾವಣಿ ಹಾರಿ ಹೋಗಿವೆ. ಅಡಹಳ್ಳಟ್ಟಿ ಗ್ರಾಮದ ಸಿದರಾಯ ದೊಡವಾಡ ಹಾಗೂ ಭೀಮು ಕೇರಿಯವರ ದ್ರಾಕ್ಷಿ ಬೆಳೆಗೆ ಆಸರೆಯಾಗಿದ್ದ ಕಂಬಗಳು ನೆಲಕ್ಕುರುಳಿದ ಪರಿಣಾಮ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಯಲಿಹಡಲಗಿ, ಕೋಹಳ್ಳಿ, ರಾಮತೀರ್ಥ, ಯಲ್ಲಮ್ಮನವಾಡಿ, ಸುಟ್ಟಟ್ಟಿ, ಬಾಡಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪಾರ ಬೆಳೆ ಹಾನಿ ಸಂಭವಿಸಿದೆ.
ಹಾನಿಗೊಳಗಾದ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಪಿ.ಡಿ. ಬಡಿಗೇರ ಆಗಮಿಸಿ ಪರಿಶೀಲಿಸಿದರು. ಬೆಳೆ ಹಾಗೂ ಮನೆ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ನಷ್ಟಕ್ಕೊಳಗಾದ ಜನರು ಒತ್ತಾಯಿಸಿದ್ದಾರೆ.