ಗಜೇಂದ್ರಗಡ: ಪಟ್ಟಣದಲ್ಲಿ ನಿರಂತರ ಮಳೆಯಿಂದಾಗಿ ಪುರಸಭೆ ಕಾರ್ಯಾಲಯ, ಉಪನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ನೀರು ತುಂಬಿಕೊಂಡು ಸಾರ್ವಜನಿಕರು ಪರದಾಡುವಂತಾಗಿದೆ.
ಪುರಸಭೆ ಕಚೇರಿ ಆವರಣದಲ್ಲಿಯೇ ಉಪನೋಂದಣಾಧಿಕಾರಿ ಕಚೇರಿ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಆಧಾರ್ ನೋಂದಣಿ ಕೇಂದ್ರಗಳಿವೆ. ಈ ಕಚೇರಿಗಳಿಗೆ ನಿತ್ಯ ಸಾವಿರಾರು ಜನರು ಅಲೆದಾಡುತ್ತಾರೆ.
ಮಳೆ ನೀರು ಸಂಗ್ರಹಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ. ಹೀಗಾಗಿ ಆವರಣದಲ್ಲಿ ನಿಂತಿರುವ ನೀರನ್ನು ಹೊರಗೆ ಕಳಿಸುವಂತಹ ವ್ಯವಸ್ಥೆ ಮಾಡಬೇಕು ಎಂದು ಮುತ್ತು ಪಾಟೀಲ, ಮಹಾಂತೇಶ ಮ್ಯಾಗೇರಿ, ಮಹಾಂತೇಶ ಹಿಡಕಿಮಠ, ಶಿವು ಬನಿಗೋಳ, ವಿಶ್ವನಾಥ ಯಂಕಂಚಿ ಒತ್ತಾಯಿಸಿದ್ದಾರೆ.