ಜಿಲ್ಲಾದ್ಯಂತ ಸೋಮವಾರ ರಾತ್ರಿಯಿಂದ ವರುಣನ ಆರ್ಭಟ ಮುಂದುವರೆದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಕುಕನೂರು ತಾಲೂಕಿನ ವೀರಾಪುರ ಗ್ರಾಮಕ್ಕೆ ಹಿರೇಹಳ್ಳದ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಗ್ರಾಮದ ದೇವಾಲಯವೂ ಸಂಪೂರ್ಣ ಜಲಾವೃತಗೊಂಡಿದೆ. ಹಿರೇಹಳ್ಳ ಜಲಾಶಯ ತುಂಬಿ ಹರಿದ ಪರಿಣಾಮ ಸುಮಾರು ಮೂವತ್ತು ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ.
ಇದರಿಂದ ಹಳ್ಳದ ಅಕ್ಕಪಕ್ಕದ ಜಮೀನುಗಳು ಜಲಾವೃತಗೊಂಡಿವೆ. ಕೋಳೂರ ಬಳಿಯ ಬ್ರಿಡ್ಜ್ ಕಮ್ ಬ್ಯಾರೇಜ್ ಕಳೆದ ಬಾರಿ ಕುಸಿದು ಬಿದ್ದಿದೆ. ಈವರೆಗೂ ಮರು ನಿರ್ಮಾಣ ಮಾಡಿಲ್ಲ. ಹೀಗಾಗಿ ಹಳ್ಳದ ನೀರು ಮತ್ತೆ ರೈತರ ಜಮೀನಿಗೆ ನುಗ್ಗುವಂತಾಗಿದೆ. ಬೆಳೆದ ಬೆಳೆಗಳೆಲ್ಲ ನೀರಿಗೆ ಕೊಚ್ಚಿ ಹೋಗುತ್ತಿವೆ.
ಭಟಪನಹಳ್ಳಿ, ಚಿಕೇನಕೊಪ್ಪ ಗ್ರಾಮಗಳ ನಡುವಿನ ಹಳ್ಳ ಬೋರ್ಗೆರೆದ ಪರಿಣಾಮ ಜನರು ದಡ ಸೇರಲು ಪರದಾಡಿದರು. ರಭಸವಾಗಿ ಹರಿವ ನೀರಿನಲ್ಲೇ ಕೆಲವರು ಬೈಕ್ ಚಲಾಯಿಸುವ ಸಾಹಸ ಮಾಡಿದರು. ಯಲಬುರ್ಗಾ ತಾಲೂಕಿನ ವಣಗೇರ ಗ್ರಾಮದ ರೈತ ನಿಂಗಪ್ಪ ಬೆಲ್ಲದ್ ಎಂಬುವರ ಆಕಳು ಸಿಡಿಲಿಗೆ ಬಲಿಯಾಗಿದೆ.