ಚನ್ನಮ್ಮನ ಕಿತ್ತೂರ: 4-5 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ತಾಲೂಕಿನಲ್ಲಿ ಹಲವಾರು ಮನೆಗಳು ನೆಲಸಮವಾಗಿದ್ದು, ಕೆಲ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ತಾಲೂಕಿನ ಬಸಾಪುರ, ಶೀಗಿಹಳ್ಳಿ ಕೆ.ಎ., ಅವರಾದಿ, ಎಂ.ಕೆ. ಹುಬ್ಬಳ್ಳಿ, ದಾಸ್ತಿಕೊಪ್ಪ, ದೇವರ ಶೀಗಿಹಳ್ಳಿ ಸೇರಿ ಮತ್ತಿತರ ಗ್ರಾಮಗಳಲ್ಲಿ ಅನೇಕ ಮನೆಗಳು ಮಳೆಯಿಂದಾಗಿ ನೆಲಕ್ಕುರುಳಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ. ಮಳೆಯಿಂದಾಗಿ ಜಾನುವಾರು ಹಾಗೂ ಕುಟುಂಬ ಸದಸ್ಯರನ್ನು ರಕ್ಷಿಸುವುದು ಕಷ್ಟಕರವಾಗಿದೆ ಎಂದು ಮನೆ ಕಳೆದುಕೊಂಡ ಬಸಾಪುರದ ಗೌಡಪ್ಪ ಪಾಟೀಲ ಅಳಲು ತೋಡಿಕೊಂಡಿದ್ದಾರೆ. ಮಳೆಯಿಂದಾಗಿ ತಾಲೂಕಿನಲ್ಲಿ 4 ದಿನಗಳಲ್ಲಿ 15 ಮನೆಗಳು ಕುಸಿದುಬಿದ್ದಿವೆ.