ಮಂಡ್ಯ: ಕೆಲ ದಿನದಿಂದ ಅಬ್ಬರಿಸಿದ ವರುಣ ಜಿಲ್ಲೆಯಲ್ಲಿ ಶಾಂತವಾಗಿದೆ. ಎರಡು ದಿನದಿಂದ ಸಾಧಾರಣ ಮಳೆಯಾಗುತ್ತಿದ್ದು, ಶುಕ್ರವಾರ ಜಿಲ್ಲಾದ್ಯಂತ ಕೇವಲ 2.6 ಮಿ.ಮೀ ಮಳೆಯಾಗಿದೆ.
ಈ ವಾರದ ಪ್ರಾರಂಭದಲ್ಲಿ ಮಳೆ ಅಬ್ಬರ ಕಂಡು ಜಿಲ್ಲೆಯ ಜನರು ದಿಕ್ಕು ತೋಚದಂತಾಗಿದ್ದರು. ಆದರೆ ಕಾಲಕ್ರಮೇಣ ವರುಣನ ಅಬ್ಬರ ಇಳಿಮುಖವಾಗಿದೆ. ಆದರೂ ನಿರಂತರವಾಗಿ ಸುರಿದ ಹಿನ್ನೆಲೆಯಲ್ಲಿ ಕೆಲವೆಡೆ ಅವಾಂತರ ಮುಂದುವರೆದಿದೆ. ಕೆಆರ್ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣದಲ್ಲಿ ಇಳಿಮುಖ ಕಂಡಿಲ್ಲ. ಶನಿವಾರ 74726 ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ಅಂತೆಯೇ 77,999 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ಜನರು ಓಡಾಡದಂತೆ ತಾಲೂಕು ಎಚ್ಚರಿಕೆ ನೀಡಿದೆ. ಇದನ್ನೂ ಮೀರಿಯೂ ಕೆಲವರು ಅತಿರೇಕದ ವರ್ತನೆ ತೋರಿಸುತ್ತಿರುವುದು ನಡೆಯುತ್ತಿದೆ.