ತಲ್ಲೂರ: ಗಾಳಿಯೊಂದಿಗೆ ಇತ್ತೀಚೆಗೆ ಸುರಿದ ಮಳೆಗೆ ಗ್ರಾಮದ ನಾಲ್ಕು ಮನೆಯ ಛಾವಣಿ ಶೀಟ್ ಹಾರಿ ಹೋಗಿವೆ. ಮನೆಯಲ್ಲಿರುವ ಅಡುಗೆ ಸಾಮಗ್ರಿಗಳು ನಜ್ಜುಗುಜ್ಜಾಗಿವೆ. ಗ್ರಾಮದ ಬಸವರಾಜ ಉಜ್ಜೀನಕೊಪ್ಪ ಅವರ ತಗಡಿನ ಮನೆಯ ಛಾವಣಿ ಸಂಪೂರ್ಣ ಕಿತ್ತು ಹೋಗಿದೆ.
ಮೆನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ‘ಲಾಕ್ಡೌನ್ದಿಂದ ಕೆಲಸವಿಲ್ಲದೇ ಬದುಕುವುದೇ ಕಷ್ಟವಾಗಿದೆ. ಇಂತಹ ವೇಳೆ ಮನೆಯೂ ಹಾಳಾಗಿ ಹೋಗಿದ್ದು ನಮಗೆ ದಿಕ್ಕೇ ತೋಚದಂತಾಗಿದೆ’ ಎಂದು ಬಸವರಾಜ ಅವರ ಪತ್ನಿ ಶೈಲಾ ತಮ್ಮ ಅಳಲು ತೋಡಿಕೊಂಡರು. ಸುದ್ದಿ ತಿಳಿದ ತಕ್ಷಣ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ವಿವಿಧ ಗ್ರಾಮಗಳಲ್ಲಿ ಜೋಳ ಹಾಗೂ ಬಾಳೆ ಬೆಳೆ ನಾಶವಾಗಿದೆ.