ರಾಯಚೂರು: ನಗರಸಭೆ ಅಧಿಕಾರ ಕಾಂಗ್ರೆಸ್ ಕೈತಪ್ಪಲು ಮಾಜಿ ಎಂಎಲ್ಸಿ ಎನ್.ಎಸ್.ಭೋಸರಾಜು ಮತ್ತು ಅವರ ಪುತ್ರ ರವಿ ಭೋಸರಾಜು ಕಾರಣ. ತಮ್ಮ ಸ್ವಾರ್ಥಕ್ಕಾಗಿ ಪಕ್ಷ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ್ದಾರೆಂದು ನಗರಸಭೆ ಮಾಜಿ ಅಧ್ಯಕ್ಷ ಇ.ವಿನಯಕುಮಾರ ಆರೋಪಿಸಿದರು.
ನಾನು ನಗರಸಭೆ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ನನ್ನನ್ನು ಅಧಿಕಾರದಿಂದ ಇಳಿಸಲು ಷಡ್ಯಂತ್ರ ನಡೆಸಿದರು. ನಗರಸಭೆಯ ಹಲವು ಸದಸ್ಯರು ಹೇಳಿದರೂ ಕೇಳದೆ ರವಿ ಭೋಸರಾಜು ತೆಗೆದುಕೊಂಡ ನಿರ್ಧಾರದಿಂದ ಕಾಂಗ್ರೆಸ್ಗೆ ನಷ್ಟವುಂಟಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಹಿಂದೆ ನಡೆದ ಒಪ್ಪಂದದಂತೆ ನಾನು 15 ತಿಂಗಳ ನಂತರ ರಾಜೀನಾಮೆ ನೀಡಿ ಸಾಜೀದ್ ಸಮೀರ್ಗೆ ಅಧಿಕಾರ ನೀಡಲು ಸಿದ್ಧನಿದ್ದೆ. ಪೂರ್ವ ಸಿದ್ಧತೆಯಿಲ್ಲದೆ ನನ್ನ ವಿರುದ್ಧ ಅವಿಶ್ವಾಸ ಮಂಡಿಸುವಂತೆ ಮಾಡಿ ರವಿ ಭೋಸರಾಜು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ಪರ 18 ಸದಸ್ಯರಿದ್ದರೆ ನಾನು ಮತ ಚಲಾಯಿಸಲು ಬರುತ್ತೇನೆಂದು ಹೇಳಿದ್ದೆ. ನಮಗೆ ಸದಸ್ಯರ ಬಲ ಇಲ್ಲದ ಕಾರಣ ಹೋಗಲಿಲ್ಲ. ಪಕ್ಷದ ಅಭ್ಯರ್ಥಿ ವಿರುದ್ಧ ಗೆದ್ದ ಪಕ್ಷೇತರ ಸದಸ್ಯ ಸಾಜೀದ್ ಸಮೀರ್ ಮೊದಲು ಪಕ್ಷ ವಿರೋಧಿಯಾಗಿದ್ದಾರೆ.
ಅಧಿಕಾರಾವಧಿಯ 15 ತಿಂಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಸದಸ್ಯರು ಕೆಲಸ ಮಾಡಲು ಬಿಡಲಿಲ್ಲ. ಸಭೆ ನಡೆಯಂತೆ ಷಡ್ಯಂತ್ರ ನಡೆಸಿದರು. ತಮಗೆ ಬೇಡವಾದ ಕಾರಣ ಕೆಪಿಸಿಸಿ ವಕ್ತಾರ ಎ.ವಸಂತಕುಮಾರರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಇ.ವಿನಯಕುಮಾರ ಹೇಳಿದರು.
ಚುನಾವಣೆಗೆ ಗೈರಾಗಿದ್ದ ಸದಸ್ಯೆ ಶೈನಾಜ್ ಬೇಗಂ ಮಾತನಾಡಿ, ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದೆ. ವಿನಾಕಾರಣ ನನ್ನ ಅಪಹರಣ ಮಾಡಲಾಗಿದೆ ಎಂದು ಊಹಾಪೋಹ ಹರಡಲಾಯಿತು. ನನ್ನ ಪುತ್ರನಿಗೆ ಬೆದರಿಕೆ ಹಾಕಿ ಆತನಿಂದಲೇ ಪೊಲೀಸ್ ಆಯುಕ್ತರಿಗೆ ದೂರು ಕೊಡಿಸಲಾಗಿದೆ ಎಂದು ತಿಳಿಸಿದರು. ನಗರಸಭೆ ಮಾಜಿ ಸದಸ್ಯರಾದ ಈಶಪ್ಪ, ಎಂ.ಕೆ.ಬಾಬರ್, ಮಹ್ಮದ್ ಫಾರೂಕ್ ಇದ್ದರು.