ರಾಷ್ಟ್ರೀಯ ಅಂಚೆ ಸಂಸ್ಥೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಶಿವಕುಮಾರ ಅನಿಸಿಕೆ
ರಾಯಚೂರು: ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅಂಚೆ ಇಲಾಖೆಯನ್ನು ದುರ್ಬಲಗೊಳಿಸುವ ಸಲುವಾಗಿ ಖಾಸಗೀಕರಣದ ಹುನ್ನಾರ ನಡೆದಿದ್ದು, ಇದರ ವಿರುದ್ಧ ನೌಕರರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ರಾಷ್ಟ್ರೀಯ ಅಂಚೆ ಸಂಸ್ಥೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಶಿವಕುಮಾರ ಹೇಳಿದರು.
ಖಾಸಗಿ ಹೋಟೆಲ್ನಲ್ಲಿ ರಾಷ್ಟ್ರೀಯ ಅಂಚೆ ನೌಕರರ ಸಂಘ ಭಾನುವಾರ ಏರ್ಪಡಿಸಿದ್ದ 21ನೇ ದ್ವೈವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ನೌಕರರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿರುವ ಇಲಾಖೆ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಅಗತ್ಯ ಎಂದರು.
ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಸರ್ಕಾರ, ಆಡಳಿತ ಮಂಡಳಿ ಸ್ಪಂದನೆ ನೀಡದಿರುವುದರಿಂದ ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದರು.
ಇಲಾಖೆಯ ಕಚೇರಿಗಳಲ್ಲಿ ಉಂಟಾಗುತ್ತಿದ್ದ ನೆಟ್ವರ್ಕ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸಂಘ ನಡೆಸಿದ ಪ್ರಯತ್ನಿದಿಂದ ಕಚೇರಿಗಳಿಗೆ 4ಜಿ ಸಂಪರ್ಕ ಕಲ್ಪಿಸಿರುವುದರಿಂದ ಕೆಲಸ ಕಾರ್ಯಗಳು ಸುಲಭವಾಗಿ ನಡೆಯುವಂತಾಗಿದೆ ಎಂದರು.
ರಾಷ್ಟ್ರೀಯ ಅಂಚೆ ನೌಕರರ ಕರ್ನಾಟಕ ವಲಯ ಕಾರ್ಯದರ್ಶಿ ಖಂಡೋಜಿರಾವ್ ಮಾತನಾಡಿ, ಕರೊನಾ ಸಂದರ್ಭದಲ್ಲಿ ಅಂಚೆ ನೌಕರರು ಜೀವದ ಹಂಗು ತೊರೆದು ಕೆಲಸ ಮಾಡಿದರೂ ಕರೊನಾದಿಂದ ಮೃತಪಟ್ಟ ನೌಕರರಿಗೆ ಪರಿಹಾರ ನೀಡಲಾಗಿಲ್ಲ. 10 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದ ಸರ್ಕಾರ ಮಾತಿಗೆ ತಪ್ಪಿದೆ. ಕಾನೂನಿನಡಿ ಸಭೆ ನಡೆಸಿ ನೌಕರರ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ. ಕರೊನಾ ಸಂದರ್ಭದ ಒತ್ತಡ ಈಗ ಕಡಿಮೆಯಾಗಿದ್ದು, ಕೆಳಹಂತದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದರು.
ಅಂಚೆ ಇಲಾಖೆ ನೌಕರರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳಾದ ಶ್ಯಾಮಸುಂದರ, ಸಂಗಪ್ಪ, ಹನುಮಂತಪ್ಪ ಅಡವಿ, ಮೋಹನ್ಕುಮಾರ ಕಟ್ಟಿಮನಿ, ರಾಜು ಮಡಿವಾಳರ್, ಬಸವರಾಜ ದೊರೆ ಇದ್ದರು.