ರಾಯಚೂರು: ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞ ಡಿ.ಎಂ.ನಂಜುಂಡಪ್ಪ ವರದಿಯ ಶಿಫಾರಸಿನಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಎಂಟು ಸಚಿವ ಸ್ಥಾನ ನೀಡುವುದರ ಜತೆಗೆ ಜಿಲ್ಲೆಗೆ ಸಚಿವ ಸ್ಥಾನ ನೀಡುವ ಮೂಲಕ ತಾರತಮ್ಯ ನಿವಾರಿಸಲು ಕಾಂಗ್ರೆಸ್ ಮುಂದಾಗಬೇಕು ಎಂದು ಹೈ.ಕ. ಜನಾಂದೋಲನ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಒತ್ತಾಯಿಸಿದರು.
15 ವರ್ಷಗಳಿಂದ ಆಗುತ್ತಿರುವ ಅನ್ಯಾಯ
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ನಿಗಮ, ಮಂಡಳಿ, ಮತ್ತು ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಶೇ.25 ಅಧ್ಯಕ್ಷ ಸ್ಥಾನಗಳನ್ನು ಕಲ್ಯಾಣ ಕರ್ನಾಟಕ ಭಾಗದವರಿಗೆ ನೀಡುವ ಮೂಲಕ ಕಳೆದ 15 ವರ್ಷಗಳಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ
ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೇವಲ ಇಬ್ಬರಿಗೆ ಸಚಿವ ಸ್ಥಾನ ನೀಡುವ ಮೂಲಕ ನಾಯಕತ್ವವನ್ನು ಬೆಳೆಸದ ಕಾರಣ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದು, ಆ ತಪ್ಪನ್ನು ಕಾಂಗ್ರೆಸ್ ಮಾಡಬಾರದು. ನಿರ್ಲಕ್ಷೃ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಬಂದ ಸ್ಥಿತಿ ಕಾಂಗ್ರೆಸ್ಗೂ ಬರಲಿದೆ.
ಗ್ಯಾರಂಟಿ ಭರವಸೆ, ಅಪಹಾಸ್ಯಕ್ಕೆ ಗುರಿ
ಸಿಎಂ ಸ್ಥಾನ ಕುರಿತು ಕಾಂಗ್ರೆಸ್ನಲ್ಲಿ ನಡೆದಿರುವ ಪೈಪೋಟಿ ಸರಿಯಲ್ಲ. ಡಿ.ಕೆ.ಶಿವಕುಮಾರ ಆರೋಪ ಮುಕ್ತರಾಗಿ ಸಿಎಂ ಸ್ಥಾನಕ್ಕೆ ಬಂದರೆ ಗೌರವವಿರುತ್ತದೆ. ಸಿದ್ದರಾಮಯ್ಯಗೆ ಅವಕಾಶ ನೀಡುವುದು ಸೂಕ್ತವಾಗಿದೆ. ಗ್ಯಾರಂಟಿ ಭರವಸೆಗಳನ್ನು ಈಡೇರಿಸದಿದ್ದರೆ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ 100 ಸ್ಥಾನಗಳಲ್ಲಿ ಗೆಲ್ಲದಿದ್ದಲ್ಲಿ ಪಕ್ಷ ವಿಸರ್ಜಿಸುವುದಾಗಿ ಹೇಳಿದ್ದರು. ಪಕ್ಷ ಅವರ ಮನೆತನದ ಆಸ್ತಿಯಲ್ಲ. ಹಲವಾರು ಮಹನೀಯರು ಕಟ್ಟಿ ಬೆಳೆಸಿದ್ದು, ಪಕ್ಷ ವಿಸರ್ಜನೆ ಮಾಡುವ ಅವಶ್ಯ ಇಲ್ಲ.
ದೇವದುರ್ಗದ ಕೆ.ಶಿವನಗೌಡ ನಾಯಕ ಕೂಡಾ ರಾಜಕೀಯ ನಿವೃತ್ತಿ ಪಡೆಯಬೇಕಾಗಿಲ್ಲ. ಜನರ ಕ್ಷಮೆ ಕೇಳಿದರೆ ಸಾಕು ಎಂದು ರಾಘವೇಂದ್ರ ಕುಷ್ಟಗಿ ಹೇಳಿದರು. ಪದಾಧಿಕಾರಿಗಳಾದ ಭೀಮರಾಯ ಜರದಬಂಡಿ, ಜಾನ್ ವೆಸ್ಲಿ, ಖಾಜಾ ಅಸ್ಲಂ, ಮಾರೆಪ್ಪ ಹರವಿ, ವೀರಣ್ಣ ಭಂಡಾರಿ, ಪರಪ್ಪ ನಾಗೋಲಿ, ಆಂಜನೇಯ ಇದ್ದರು.