ರಾಯಚೂರು: ನಗರದ ಎಸ್ಆರ್ಪಿಎಸ್ ಪಿಯು ಕಾಲೇಜು ಮೈದಾನದಲ್ಲಿ ಅ.5ರಂದು ಬೆಳಗ್ಗೆ 10ಕ್ಕೆ ಸ್ನೇಹಾ ಭಂಡಾರಿಯ ಜೈನ್ ಭಗವತಿ ದೀಕ್ಷಾ ಮಹೋತ್ಸವ ನಡೆಯಲಿದೆ ಎಂದು ವರ್ಧಮಾನ ಸ್ಥಾನಕವಾಸಿ ಜೈನ್ ಶ್ರಾವಕ್ ಸಂಘದ ಅಧ್ಯಕ್ಷ ಪಾರಸಮಲ್ ಸುಖಾಣಿ ತಿಳಿಸಿದರು.
ಸ್ಥಳೀಯ ಜೈನ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬೆಳಗ್ಗೆ 8ಕ್ಕೆ ಜೈನ್ ಭವನದಿಂದ ಎಸ್ಆರ್ಪಿಎಸ್ ಪಿಯು ಕಾಲೇಜುವರೆಗೆ ಶೋಭಾ ಯಾತ್ರೆ ನಡೆಯಲಿದ್ದು, ನಂತರ ಮಹಾಸತಿಯಾಜೀ ಇಂದುಬಾಲಾ ದೀಕ್ಷಾ ಬೋಧನೆ ಮಾಡಲಿದ್ದಾರೆ ಎಂದರು.
ಜಗತ್ತಿನ ಎಲ್ಲ ಸುಖಗಳನ್ನು ಧಿಕ್ಕರಿಸಿ ಸ್ನೇಹಾ ಭಂಡಾರಿ ಸನ್ಯಾಸತ್ವ ದೀಕ್ಷೆ ಸ್ವೀಕರಿಸಲಿದ್ದು, ಧರ್ಮಗುರುಗಳು ಎಲ್ಲ ಪರೀಕ್ಷೆಗಳನ್ನು ನಡೆಸಿ ಸ್ನೇಹಾ ಭಂಡಾರಿಗೆ ದೀಕ್ಷೆ ಸ್ವೀಕಾರಕ್ಕೆ ಅನುಮತಿ ನೀಡಿದ್ದಾರೆ. ದೀಕ್ಷೆ ಸ್ವೀಕಾರದ ನಂತರ ಎರಡು ವಸ್ತ್ರ, ಭೀಕ್ಷೆ ಪಾತ್ರೆಯೊಂದು ಯಾವುದೇ ವಾಹನವನ್ನು ಬಳಸದೇ ನಡೆದುಕೊಂಡು ಸಂಚಾರ ಮಾಡಬೇಕಾಗುತ್ತದೆ.
ಕರ್ಮ ಸಿದ್ಧಾಂತದ ಮೇಲೆ ಮುನ್ನಡೆಯುತ್ತಿರುವ ಜೈನ್ ಧರ್ಮದಲ್ಲಿ ಸನ್ಯಾಸತ್ವ ಸ್ವೀಕಾರಕ್ಕೆ ಹಲವಾರು ಕಟ್ಟುಪಾಡುಗಳಿದ್ದು, ಅವುಗಳನ್ನು ಒಪ್ಪಿಕೊಂಡು ಸ್ನೇಹಾ ಭಂಡಾರಿ ಸನ್ಯಾಸತ್ವ ದೀಕ್ಷೆ ಪಡೆಯಲು ಮುಂದಾಗಿದ್ದಾರೆ ಎಂದು ಪಾರಸಮಲ್ ಸುಖಾಣಿ ತಿಳಿಸಿದರು.
ಸನ್ಯಾಸತ್ವ ದೀಕ್ಷೆ ಸ್ವೀಕರಿಸಲಿರುವ ಸ್ನೇಹಾ ಭಂಡಾರಿ ಮಾತನಾಡಿ, ಜಗತ್ತಿನಲ್ಲಿ ಎಲ್ಲರೂ ಸುಖದ ಹಿಂದೆ ಬೀಳುತ್ತಿದ್ದಾರೆ. ಭಗವಂತನ ಸ್ಮರಣೆಯಿಂದ ಮಾತ್ರ ಅಂತರಾಳದ ಸುಖ ದೊರೆಯಲಿದೆ. ಜೀವನದಲ್ಲಿ ಮೋಕ್ಷ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ತಂದೆ ಜ್ಞಾನಚಂದ ಭಂಡಾರಿ, ತಾಯಿ ಸುನಿತಾ ಭಂಡಾರಿ ಒಪ್ಪಿಗೆ ಪಡೆದು ಸನ್ಯಾಸತ್ವ ದೀಕ್ಷೆ ಪಡೆಯುತ್ತಿದ್ದೇನೆ ಎಂದರು.
ಸಂಘದ ಕಾರ್ಯದರ್ಶಿ ಸಂಜತ್ ಸಂಚೇರಿ, ಜಂಟಿ ಕಾರ್ಯದರ್ಶಿ ಗೌತಮ್ ಗಿನ್ಯಾ, ದೀಕ್ಷಾ ಸಮಿತಿ ಸಂಯೋಜಕ ನರೇಂದ್ರರಾಜ್ ಮೂಥಾ ಉಪಸ್ಥಿತರಿದ್ದರು.