ರಾಯಚೂರು: ಆಸ್ಸಾಂ ಪೊಲೀಸರಿಂದ ಬಂಧಿತರಾಗಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಯನ್ನು ಬಿಡುಗಡೆಗೊಳಿಸಬೇಕು. ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ತಡೆಯೊಡ್ಡಬೇಕೆಂದು ಕರ್ನಾಟಕ ಜನಶಕ್ತಿ, ಜನಸಂಗ್ರಾಮ ಪರಿಷತ್ ಹಾಗೂ ದಲಿತ ಸಂಘರ್ಷ ಸಮಿತಿ ಒತ್ತಾಯಿವೆ.
ಈ ಕುರಿತು ಸಂಘಟನೆಗಳ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಬುಧವಾರ ಮನವಿ ಸಲ್ಲಿಸಿದರು. ಟ್ವಿಟರ್ ಕಮೆಂಟ್ ಆಧರಿಸಿ ಶಾಸಕ ಜಿಗ್ನೇಶ್ ಮೇವಾನಿ ಬಂಧನ ಖಂಡನೀಯ. ಸಂವಿಧಾನಬದ್ಧವಾಗಿ ಹೋರಾಟ ಮಾಡುವವರ ವಿರುದ್ಧ ಹಾಗೂ ಪ್ರಶ್ನೆ ಮಾಡುವವರ ವಿರುದ್ಧ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಇದರಲ್ಲಿ ಬಹುತೇಕ ಶೋಷಿತ ಸಮುದಾಯದವರಿದ್ದಾರೆ. ಸಮಾಜದಲ್ಲಿ ಎಲ್ಲರೂ ಸುರಕ್ಷಿತವಾಗಿ ಬದುಕುವಂತೆ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿ ಪ್ರಧಾನಿಯದಾಗಿದೆ ಎಂದು ಹೇಳಿದರು.