ರಾಯಚೂರು: ಕಾರ್ಮಿಕರ ಶೋಷಣೆಗೆ ಅವಕಾಶ ನೀಡುವ ಕಾರ್ಖಾನೆ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಐಯುಟಿಯುಸಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿರುವುದು ಹಾಗೂ ದಿನಕ್ಕೆ 12 ಗಂಟೆ ದುಡಿಮೆ ಅವಧಿ ನಿಗದಿ ಮಾಡುತ್ತಿರುವುದು ಖಂಡಿಸಿದರು.
ವಿರಾಮವಿಲ್ಲದೆ 8 ಗಂಟೆಗಳ ಕಾಲ ಕೆಲಸ ಮಾಡುವ ಪರವಾಗಿ ಸದನದಲ್ಲಿ ಏಕಾಏಕಿ ತಿದ್ದುಪಡಿ ಮಾಡಿದ್ದು ಜನ ವಿರೋಧಿಯಾಗಿದೆ. ಸರ್ಕಾರವು ಕಾರ್ಮಿಕರನ್ನು ಮಾಲೀಕರು ಶೋಷಣೆ ಮಾಡಲು ಹಾಗೂ ಶೋಷಣೆಗೆ ಅವಕಾಶ ನೀಡಿದಂತಾಗಲಿದೆ.
ಮಹಿಳೆಯರ ಸುರಕ್ಷತೆ ಬಗ್ಗೆ ಹಲವಾರು ಕಾಯ್ದೆಗಳು ಇದ್ದರೂ ಸಹ ಮಹಿಳೆಯರು ಮೇಲಿನ ಅಪರಾಧಗಳು ಮಿತಿ ಮೀರಿವೆ. ರಾತ್ರಿ ಪಾಳಿಯಿಂದಾಗಿ ಇನ್ನಷ್ಟು ಅಭದ್ರತೆ, ಅಸುರಕ್ಷತೆಗೆ ಹೆಣ್ಣು ಮಕ್ಕಳನ್ನು ತಳ್ಳಿದಂತಾಗುತ್ತದೆ. ಮಹಿಳೆಯರನ್ನು ಅಪರಾಧಗಳಿಗೆ ಬಲಿಪಶುವಾಗುವಂತಹ ಪರಸ್ಥಿತಿಗೆ ತರಲಾಗುತ್ತಿದೆ.
ಕುಟುಂಬದ ಹೊಣೆ ಹೊತ್ತ ಮಹಿಳೆಯರು ಕೌಟುಂಬಿಕ ಬಿಕ್ಕಟ್ಟಿಗೆ ಮತ್ತಷ್ಟು ಎಡೆ ಮಾಡಿಕೊಟ್ಟಂತಾಗುತ್ತಿದೆ. ಸರ್ಕಾರವು ಈ ಮಸೂದೆಯನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಎನ್.ಎಸ್.ವೀರೇಶ, ಪದಾಧಿಕಾರಿಗಳಾದ ತಿರುಮಲರಾವ್, ಎಸ್.ಅಣ್ಣಪ್ಪ, ಮಹೇಶ ಚೀಲಕಪರ್ವಿ, ರಾಘವೇಂದ್ರ ಉಪಸ್ಥಿತರಿದ್ದರು.