ರಾಯಚೂರು: ವಿದ್ಯಾರ್ಥಿಗಳಲ್ಲಿ ಓದಿನೊಂದಿಗೆ ಜೀವನದಲ್ಲಿ ಸಾಧಿಸುವ ಹಾಗೂ ಜಗತ್ತಿಗೆ ತಮ್ಮ ಸಾಧನೆಯ ಕೊಡುಗೆ ನೀಡುವ ಇಚ್ಛೆ ಅವಶ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರಗೇಶ ಹೇಳಿದರು.
ನಗರದ ಕೋಟೆ ಆವರಣದಲ್ಲಿ ಜ್ಞಾನ ದರ್ಶಿನಿ ಶಿಕ್ಷಣ ಸಂಸ್ಥೆಯಿಂದ ಹಮ್ಮಿಕೊಂಡಿದ್ದ 17ನೇ ಸ್ಪರ್ಧಾತ್ಮಕ ಮಾದರಿ ಪರೀಕ್ಷೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾನ್ವಿತರಿದ್ದಾರೆ. ರಾಯಚೂರು ಹಿಂದುಳಿದ ಜಿಲ್ಲೆಯಲ್ಲ. ಜ್ಞಾನದಲ್ಲಿ ಮುಂದುವರೆದ ಜಿಲ್ಲೆಯಾಗಿದೆ. ಚಿನ್ನದ ಗಣಿ, ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿವೆ. ಕೋವಿಡ್ ಸಂದರ್ಭದಲ್ಲಿ ದೇಶದ ವಿವಿಧೆಡೆ ಅತಿ ಹೆಚ್ಚು ಅಕ್ಕಿಯನ್ನು ಜಿಲ್ಲೆಯಿಂದ ಸರಬರಾಜು ಮಾಡಲಾಗಿದೆ ಎಂದರು.
ಜಿಲ್ಲೆಯ ವಿದ್ಯಾರ್ಥಿಗಳು ಕೆಎಎಸ್ ಮತ್ತು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಬೇಕು. ಭೌಗೋಳಿಕ ಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಪ್ರಚಲಿತ ವಿದ್ಯಾಮಾನಗಳ ಜ್ಞಾನ ವೃದ್ಧಿಸಿಕೊಳ್ಳಬೇಕು. ನಿರಂತರ ಅಭ್ಯಾಸ ಹಾಗೂ ಓದಿರುವುದನ್ನು ಮನನ ಮಾಡಿಕೊಳ್ಳಬೇಕು ಎಂದು ಎಡಿಸಿ ಸಲಹೆ ನೀಡಿದರು.