ರಾಯ್ಪುರ: ಚುನಾವಣೆ ನಡೆಯುತ್ತಿರುವ ಛತ್ತೀಸ್ಗಡದ ರಾಯ್ಪುರ ಸಮೀಪದ ಹಳ್ಳಿಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಗದ್ದೆಗೆ ಇಳಿದಿದ್ದರು. ಯಾಕೆಂದಿರಾ, ಭತ್ತ ಕೊಯ್ಲು ಮಾಡುವ ಮೂಲಕ ಕೃಷಿಕರ ಬೆಂಬಲಕ್ಕೆ ಪಕ್ಷ ಮತ್ತು ತಾನು ಇರುವುದಾಗಿ ತೋರಿಸಿಕೊಡುವುದಕ್ಕಾಗಿ ಈ ಕೆಲಸ ಮಾಡಿದರು.
ಇದನ್ನೂ ಓದಿ: ರಾಜ್ಯ ವಿಧಾನಪರಿಷತ್ ಚುನಾವಣೆ; ಐವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಛತ್ತೀಸ್ಗಢದಲ್ಲಿ ತಮ್ಮ ಪಕ್ಷದ ಸರ್ಕಾರದ ಅಧಿಕಾರಕ್ಕೆ ಬಂದರೆ ಇದೇ ಮಾದರಿ ಭಾರತದಾದ್ಯಂತ ಪುನರಾವರ್ತಿಸಲಾಗುವುದು ಎಂದು ಹೇಳಿದರು.
ರಾಹುಲ್ ಗಾಂಧಿ ಭತ್ತ ಕಟಾವು ಮಾಡುವಾಗ ಕೂಲಿ ಕಾರ್ಮಿಕರರೊಂದಿಗೆ ಸಂವಾದ ನಡೆಸಿದರು. ಛತ್ತೀಸ್ಗಢದ ರೈತರಿಗೆ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಿಸಿದೆ. ಇದು ರೈತರನ್ನು ಸಂತುಷ್ಟಗೊಳಿಸಿದೆ ಎಂದು ರಾಹುಲ್ ಹೇಳಿದರು.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರೈತರ ಏಳಿಗೆಗಾಗಿ ಐದು ನಿರ್ಧಾರಗಳನ್ನು ತೆಗೆದುಕೊಂಡಿದೆ. ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ (MSP) ಕ್ವಿಂಟಲ್ಗೆ 2650 ರೂ., 26 ಲಕ್ಷ ರೈತರಿಗೆ 23,000 ಕೋಟಿ ಇನ್ಪುಟ್ ಸಬ್ಸಿಡಿ, 19 ಲಕ್ಷ ರೈತರ ಕೋಟ್ಯಾಂತರ ರೂ.ಸಾಲ ಮನ್ನಾ, ಅರ್ಧದಷ್ಟು ವಿದ್ಯುತ್ ಬಿಲ್ ಕಡಿತ, 5 ಲಕ್ಷ ರೈತರಿಗೆ ವರ್ಷಕ್ಕೆ 7000 ರೂ.ನೆರವು ನೀಡುವುದಾಗಿ ರಾಹುಲ್ ಗಾಂಧಿ ಅವರು ಟ್ವೀಟ್ (ಎಕ್ಸ್) ಮಾಡಿ ತಿಳಿಸಿದ್ದಾರೆ.
ರೈತರು ಸಂತೋಷವಾಗಿದ್ದರೆ ಭಾರತವೂ ಸಂತೋಷವಾಗಿದೆ. ರೈತರೊಂದಿಗೆ ಕಾಂಗ್ರೆಸ್ನ ಸಂಬಂಧ ಬಹಳ ಹಳೆಯದು ಮತ್ತು ಗಟ್ಟಿಯಾಗಿದೆ, ಅದು ಕಾಲಾನಂತರದಲ್ಲಿ ಆಳವಾಗುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಛತ್ತೀಸ್ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. 2018 ರಲ್ಲಿ 90 ವಿಧಾನಸಭಾ ಸ್ಥಾನಗಳ ಪೈಕಿ 68 ನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಶೇ.43.9 ರಷ್ಟು ಮತಗಳನ್ನು ಗಳಿಸಿತ್ತು.