ಪುದುಚೇರಿ: ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹತ್ಯೆ ನಡೆದು ಮೂರು ದಶಕಗಳೇ ಕಳೆದಿದ್ದರೂ ಇದೀಗ ಆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ತಂದೆಯ ಹತ್ಯೆಯ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಆ ಕುರಿತು ತಮ್ಮ ಅನಿಸಿಕೆಯನ್ನೂ ಹೇಳಿದ್ದಾರೆ.
ಅಷ್ಟಕ್ಕೂ ರಾಜೀವ್ ಗಾಂಧಿ ಹತ್ಯೆಯ ವಿಚಾರ ಪ್ರಸ್ತಾಪವಾಗಲು ಮುಖ್ಯ ಕಾರಣ ವಿದ್ಯಾರ್ಥಿನಿಯರು. ಪುದುಚೇರಿಯಲ್ಲಿನ ಭಾರತಿದಾಸನ್ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಜತೆ ಬುಧವಾರ ನಡೆದ ಸಂವಾದ ವೇಳೆ ಈ ವಿಷಯ ಪ್ರಸ್ತಾಪಗೊಂಡಿದೆ. ‘ನಿಮ್ಮ ತಂದೆ ಎಲ್ಟಿಟಿಇಯವರಿಂದ ಹತ್ಯೆಗೀಡಾಗಿದ್ದರು. ಎಲ್ಟಿಟಿಇ ಸದಸ್ಯರ ಬಗ್ಗೆ ನಿಮ್ಮ ಅನಿಸಿಕೆ ಏನು?’ ಎಂಬುದಾಗಿ ವಿದ್ಯಾರ್ಥಿನಿಯೊಬ್ಬರು ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆ. ಅದಕ್ಕೆ ರಾಹುಲ್ ಗಾಂಧಿ ಮುಕ್ತವಾಗಿಯೇ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: “ಮಾಂಸಾಹಾರ ಕಡಿಮೆ ಮಾಡದಿದ್ದರೆ ಭೂಮಿಗೇ ಅಪಾಯ..”
‘ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದಂತೂ ನಿಜ, ಅದು ನನ್ನ ಅತಿ ಕಷ್ಟದ ದಿನಗಳಾಗಿದ್ದವು. ಆದರೆ ನನಗೆ ಯಾರ ಬಗ್ಗೆಯೂ ಸಿಟ್ಟು ಅಥವಾ ದ್ವೇಷವಿಲ್ಲ.. ನಾನು ಕ್ಷಮಿಸುತ್ತೇನೆ..’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮಾತ್ರವಲ್ಲ, ‘ಹಿಂಸೆ ನಿಮ್ಮಿಂದ ಯಾವುದನ್ನೂ ದೂರಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ನನ್ನ ತಂದೆ ನನ್ನೊಳಗೇ ಜೀವಂತವಿದ್ದಾರೆ, ಅವರು ನನ್ನ ಮೂಲಕವೇ ಮಾತನಾಡುತ್ತಿದ್ದಾರೆ’ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ. (ಏಜೆನ್ಸೀಸ್)
VIDEO| ದೋಸೆ ಬಡಿಸುವ ಪರಿಗೆ ನೆಟ್ಟಿಗರು ಫಿದಾ: ಒಂದೇ ವಾರದಲ್ಲಿ 8 ಕೋಟಿಗೂ ಹೆಚ್ಚು ವೀಕ್ಷಣೆ!