ನವದೆಹಲಿ: ತಮಿಳುನಾಡು ಮತ್ತು ಅಸ್ಸಾಂ ಚುನಾವಣೆಗಳಿಗೆ ಸಂಬಂಧಿಸಿದ ಕಾಂಗ್ರೆಸ್ ಪಕ್ಷದ ಸಭೆ ಸೋಮವಾರ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯಿತು. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಈ ಸಭೆ ನಡೆದ ಕಾರಣ ಹಲವರ ಹುಬ್ಬೇರಲು ಕಾರಣವಾಯಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ವಿಚಾರ ತೀವ್ರ ಚರ್ಚೆಗೊಳಗಾಗಿರುವಾಗಲೇ ಈ ಸಭೆಯ ಅಧ್ಯಕ್ಷತೆಯನ್ನು ರಾಹುಲ್ ಗಾಂಧಿ ವಹಿಸಿದ್ದೂ ಕೂಡ ಅಚ್ಚರಿಗೆ ಇನ್ನೊಂದು ಕಾರಣ.
ಕಳೆದ ವರ್ಷ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರದಲ್ಲಿ ರಾಹುಲ್ ಗಾಂಧಿ ಪಕ್ಷದ ಯಾವುದೇ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿರಲಿಲ್ಲ. ಈ ನಡುವೆ, ಸಾಲು ಸಾಲು ಚುನಾವಣೆ ಸೋಲು ಅದರ ಜತೆಗೆ ಪಕ್ಷದ ಹಿರಿಯ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಾಯಕತ್ವದ ಬಗ್ಗೆ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಲಾರಂಭಿಸಿದ್ದು ಕೂಡ ನೆಹರೂ-ಗಾಂಧಿ ಕುಟುಂಬಕ್ಕೆ ತಲೆನೋವಾಗಿ ಪರಿಣಮಿಸಿತ್ತು.
ಇದನ್ನೂ ಓದಿ: ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…
ಸೋಮವಾರ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದಿಷ್ಟು – ಡಾಕ್ಟರ್ಗಳ ಸಲಹೆ ಮೇರೆಗೆ ಸೋನಿಯಾ ಗಾಂಧಿ ಅವರು ಗೋವಾದಲ್ಲಿದ್ದಾರೆ. ಚುನಾವಣೆ ಸಮೀಪದಲ್ಲಿರುವ ಕಾರಣ ಪಕ್ಷದ ನಾಯಕರು, ಕಾರ್ಯಕರ್ತರ ಅಭಿಪ್ರಾಯಗಳನ್ನು ಆಲಿಸುವಂತೆ ಅವರು ತಿಳಿಸಿದ್ರು. ಹೀಗಾಗಿ ಸಭೆಯ ಅಧ್ಯಕ್ಷತೆವಹಿಸಿದ್ದೇನೆ.
ಮುಂದಿನ ತಿಂಗಳೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇದಕ್ಕೆ ಅಗತ್ಯ ಪೂರ್ವಸಿದ್ಧತೆಗಳನ್ನು ಪಕ್ಷ ಮಾಡಿಕೊಳ್ಳುತ್ತಿದೆ. ಅವುಗಳ ನಡುವೆ, ರಾಹುಲ್ ಗಾಂಧಿಯವರೇ ಪುನಃ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತು ಕೇಳತೊಡಗಿದೆಯಾದರೂ, ಆ ಧ್ವನಿಗೆ ಬಲವಿಲ್ಲ ಎಂಬದೂ ಸತ್ಯ ಎನ್ನುತ್ತಿವೆ ಪಕ್ಷದ ಮೂಲಗಳು. (ಏಜೆನ್ಸೀಸ್)