More

    ಕೇಂದ್ರದ ಬೆಲೆ ಏರಿಕೆ ನೀತಿಯಿಂದ ಜನ ತತ್ತರ; ಸಚಿವ ಎಂ.ಬಿ. ಪಾಟೀಲ

    ವಿಜಯಪುರ: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದೂರದೃಷ್ಠಿಯ ಕೊರತೆಯಿಂದಾಗಿ ಇಂದು ದೇಶದಲ್ಲಿ ರೂಪಾಯಿ ಮೌಲ್ಯ ಕುಸಿದು ಬೆಲೆ ಏರಿಕೆಯಿಂದ ಜನರು ತತ್ತರಿಸುವಂತಾಗಿದೆ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

    ತಿಕೋಟಾ ತಾಲೂಕಿನ ಕನಮಡಿಯಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ಆದರೆ, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ಸ್ವಾತಂತ್ರ್ಯ ನಂತರ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಕ್ಷದ ಲಕ್ಷಾಂತರ ಹಿರಿಯರು ತ್ಯಾಗ ಮತ್ತು ಬಲಿದಾನ ಮಾಡಿ ಹುತಾತ್ಮರಾಗಿದ್ದಾರೆ. ಆದರೆ, ಇದೇ ಬಿಜೆಪಿಯವರು ಬ್ರಿಟೀಷರಿಗೆ ಬೆಂಬಲವಾಗಿ ನಿಂತಿದ್ದರು. ಸ್ವಾತಂತ್ರ್ಯದ ನಂತರ ದೇಶದ ಆಹಾರದ ಕೊರತೆ ನೀಗಿಸಲು ಜವಾಹರಲಾಲ ನೆಹರು ಮತ್ತು ಲಾಲ ಬಹಾದ್ದೂರ ಶಾಸ್ತ್ರಿ ಅವರು ಹಸಿರು ಹಾಗೂ ಕ್ಷೀರ ಕ್ರಾಂತಿ ಮಾಡಿದರು. ನಾನಾ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಠಿ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಿದರು. ಇಂದಿರಾ ಮತ್ತು ರಾಜೀವ ಗಾಂಧಿ ಸೂರು, ಸಂಪರ್ಕ ಕ್ರಾಂತಿ ಮಾಡಿದರು. ಆದರೆ, ಈಗ ನರೇಂದ್ರ ಮೋದಿ ಮತ್ತು ಅಮೀತ್ ಷಾ ಅವುಗಳನ್ನು ಖಾಸಗೀಕರಣದ ಮೂಲಕ ಮಾರಾಟ ಮಾಡುತ್ತಿದ್ದಾರೆ. ಅಂಬಾನಿ ಮತ್ತು ಅದಾನಿ ಅವುಗಳನ್ನು ಖರೀದಿಸುತ್ತಿದ್ದಾರೆ. ಈ ನಾಲ್ಕು ಜನರ ಸಲುವಾಗಿ ದೇಶ ನಡೆಸುವಂತಾಗಿದೆ ಎಂಬ ಚರ್ಚೆ ವ್ಯಾಪಕವಾಗಿದೆ ಎಂದರು.

    ಧರಿದೇವರ ಆಶೀರ್ವಾದದಿಂದ 684 ಮೀಟರ್ ಎತ್ತರದಲ್ಲಿರುವ ಕನಮಡಿ ಗ್ರಾಮಕ್ಕೆ ನೀರು ಕೊಟ್ಟಿದ್ದೇನೆ. ಬಾಕಿ ಇರುವ ಕಾಮಗಾರಿಗಳ ಮೂಲಕ ನೀರು ಧರಿದೇವರ ಪಾದಸ್ಪರ್ಶಿಸಿ ಮುಂದೆ ಸಾಗುವಂತೆ ಮಾಡುತ್ತೇನೆ. ನೀವು ಅನುಭವಿಸಿದ ಸಂಕಷ್ಟ ನಿಮ್ಮ ಮುಂದಿನ ಪೀಳಿಗೆ ಎದುರಿಸಬಾರದು ಎಂಬ ಮುಂದಾಲೋಚನೆಯಿಂದ ಶಾಶ್ವತ ಯೋಜನೆ ರೂಪಿಸಲಿದ್ದೇನೆ. ಜಲಕ್ರಾಂತಿಯ ನಂತರ ಜಿಲ್ಲೆಯಲ್ಲಿ ಈಗ ಉದ್ಯೋಗ ಕ್ರಾಂತಿ, ಕ್ಷೀರಕ್ರಾಂತಿ ಮಾಡುವ ಗುರಿ ಇದೆ. ಕಾನ್ವೆಂಟ್ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತೇವೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿ ನನ್ನ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.

    ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ಬಿಜೆಪಿ ಭಾವನಾತ್ಮಕ ಹೇಳಿಕೆಗಳ ನೀಡುತ್ತ ಕೋಮು ಭಾವನೆ ಕೆರಳಿಸಿ, ದೇಶದಲ್ಲಿ ಸಾಮರಸ್ಯ ಹಾಳು ಮಾಡುತ್ತಿದೆ. ಸರ್ವಾಧಿಕಾರಿಯ ಧೋರಣೆ ಮೂಲಕ ಪ್ರತಿಪಕ್ಷದ ನಾಯಕರ ವಿರುದ್ಧ ಇಡಿ, ಐಟಿ, ಸಿಬಿಐ ಮೂಲಕ ಕಿರುಕುಳ ನೀಡುತ್ತಿದೆ. ಈ ಸಂಸ್ಥೆಗಳ ಮೂಲಕ 25 ಜನ ನಾಯಕರ ಪ್ರಚಾರಕ್ಕೆ ಈ ಮೂಲಕ ಅಡ್ಡಿಪಡಿಸಿದೆ. ಈ ದೇಶದ ಸಂವಿಧಾನ ಬದಲಾವಣೆ ಮಾಡಿ ಚುನಾವಣೆ ನಡೆಯದಂತೆ, ಪ್ರಜಾಪ್ರಭುತ್ವ ತೆಗೆದು ಹಾಕಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಈ ಬಗ್ಗೆ ಮತದಾರರು ಎಚ್ಚರಿಕೆ ವಹಿಸಬೇಕು ಎಂದರು.

    ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಸಂಸದ ರಮೇಶ ಜಿಗಜಿಣಗಿ ಕಳೆದ 15 ವರ್ಷಗಳಲ್ಲಿ ಜಿಲ್ಲೆಯಲ್ಲಿ ಶೂನ್ಯ ಅಭಿವೃದ್ಧಿ ಮಾಡಿದ್ದಾರೆ. ಕರೊನಾ ಸಂದರ್ಭದಲ್ಲಿ ಯಾರಿಗೂ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಹೀಗಾಗಿ ನನಗೆ ಮತ ಕೇಳುವ ಅಧಿಕಾರವಿದ್ದು, ನನಗೆ ಮತ ಹಾಕಿ ಗೆಲ್ಲಿಸಿ. ಆ ಮೂಲಕ ಎಂ.ಬಿ. ಪಾಟೀರ ಶಕ್ತಿ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

    ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿದರು. ಮುಖಂಡರಾದ ಸಿದ್ದು ಗೌಡನವರ, ಯಾಕೂಬ್ ಜತ್ತಿ, ವಿದ್ಯಾರಾಣಿ ತುಂಗಳ, ಗೀತಾಂಜಲಿ ಪಾಟೀಲ, ಸಿದ್ದನಗೌಡ ರುದ್ರಗೌಡರ, ಎ.ಎಂ. ಬಿರಾದಾರ, ಗುರು ಮಾಳಿ, ಶಾಂತಾ ಬಿರಾದಾರ, ಮಾನಿಂಗ ಜವನರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts