ಗುವಾಹಟ: ಕೋಟ್ಯಂತರ ಜನರು ಕಾತುರದಿಂದ ಕಾಯುತ್ತಿದ್ದ ದಿನ ಇಂದು (ಜನವರಿ 22) ನೆರವೇರಿದ್ದು, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಸಂಪನ್ನಗೊಂಡಿದೆ. ದೇಶಾದ್ಯಂತ ಸಂಭ್ರಮ ಮನೆ ಮಾಡಿದ್ದು, ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸಿಹಿ ಹಂಚಿ ಸಂಭ್ರಮಿಸಲಾಗಿದೆ.
ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ನಡೆಸಲಾಗುತ್ತಿದ್ದು, ಅಸ್ಸಾಂನಲ್ಲಿ ಯಾತ್ರೆ ನಡೆಯುತ್ತಿದ್ದ ವೇಳೆ ಜೈ ಶ್ರೀರಾಮ್ ಹಾಗೂ ಪ್ರಧಾನಿ ಮೋದಿ ಪರ ಜಯ ಘೋಷಣೆ ಕೂಗುತ್ತಿದ್ದಂತೆ ರಾಹುಲ್ ಗಾಂಧಿ ತಾಳ್ಮೆ ಕಳೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಇದನ್ನೂ ಓದಿ: ಸಾನಿಯಾ-ಶೋಯೆಬ್ ವಿಚ್ಛೇದನ ಪಡೆದಿದ್ದಾರೆ; ವದಂತಿಗಳಿಗೆ ತೆರೆ ಎಳೆದ ಕುಟುಂಬಸ್ಥರು
ವೈರಲ್ ಆಗಿರುವ ವಿಡಿಯೋದಲ್ಲಿ ಬಸ್ನಲ್ಲಿ ತೆರಳುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನೋಡಿ ಕೆಲವರು ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುತ್ತಾರೆ. ಇದರಿಂದ ಕೆರಳಿದ ರಾಹುಲ್ ಕೂಡಲೇ ಬಸ್ನಿಂದ ಕೆಳಗಿಳಿದು ಗುಂಪಿನತ್ತ ಕೋಪದಲ್ಲಿ ಧಾವಿಸುತ್ತಿರುವುದನ್ನು ನೋಡಬಹುದಾಗಿದೆ.
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ, ರಾಹುಲ್ ಗಾಂಧಿ ತಾಳ್ಮೆ ಕಳೆದುಕೊಂಡಿಲ್ಲ. ಘೋಷಣೆ ಕೂಗುತ್ತಿದ್ದ ಜನರ ಬಳಿ ಮಾತನಾಡಲು ತೆರಳುತ್ತಿದ್ದಾಗ ಗುಂಪೊಂದು ಅವರನ್ನು ಹಿಂಬಾಲಿಸಿದೆ. ಅದನ್ನೇ ಬಿಜೆಪಿಯವರು ದೊಡ್ಡ ವಿಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಕಿಡಿಕಾರಿದ್ದಾರೆ.