ಪುದುಚೇರಿ: ರಾಜಕೀಯದಲ್ಲಿ ಏಟಿಗೆ ಎದಿರೇಟು ಕೊಡದೆ ಸುಮ್ಮನಿರಲಾಗುತ್ತಾ ? ಅದೂ ಚುನಾವಣೆ ಎದುರಿಗಿದ್ದಾಗ! ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈತರ ಹೋರಾಟದ ಮಾತೆತ್ತಿ ಪ್ರಧಾನಿ ಮೋದಿಯ ವರ್ಚಸ್ಸಿನ ಮೇಲೆ ಪ್ರಹಾರ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ರಾಹುಲ್ ಆಡುವ ಮಾತುಗಳನ್ನೇ ಹಿಡಿದು ಅವರ ಕಾಲೆಳೆಯುತ್ತಿದ್ದಾರೆ. ಇಂಥದೇ ಪ್ರಸಂಗವು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಪುದುಚೇರಿಯಲ್ಲಿ ನಡೆದಿದೆ.
ಪುದುಚೆರಿಯಲ್ಲಿ ಭಾನುವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಇರುವುದೇ ಗೊತ್ತಿಲ್ಲದಂತೆ ಮಾತಾಡಿದ್ದ ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ. ಹತ್ತು ದಿನಗಳ ಹಿಂದೆ, ರಾಹುಲ್ ಪುದುಚೆರಿಯಲ್ಲೇ ಆಡಿದ ಮಾತುಗಳನ್ನು ನೆನಪಿಸಿದ ಷಾ, ರಾಹುಲ್ ಅವರ ವಿದೇಶ ಪ್ರವಾಸಗಳನ್ನು ಸೂಚಿಸುತ್ತಾ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಯುವಕರು ನಮಗೆ ಮತ ನೀಡಿದ್ರೆ ನಿರುದ್ಯೋಗವನ್ನು ಶೇ. 40ಕ್ಕಿಂತ ಕಡಿಮೆ ಮಾಡುತ್ತೇವೆ: ಅಮಿತ್ ಷಾ
“ರಾಹುಲ್ ಗಾಂಧಿ ಸ್ವಲ್ಪ ದಿನಗಳ ಹಿಂದೆ ಇಲ್ಲಿ ಹೇಳಿದರು… ಮೋದಿ ಸರ್ಕಾರ ಮೀನುಗಾರರಿಗಾಗಿ ಪ್ರತ್ಯೇಕ ಇಲಾಖೆಯನ್ನು ಯಾಕೆ ಮಾಡಿಲ್ಲ ಅಂತ… ನರೇಂದ್ರ ಮೋದಿಜಿ ಮೀನುಗಾರರಿಗಾಗಿ ಪ್ರತ್ಯೇಕ ಸಚಿವಾಲಯವನ್ನೇ ರಚಿಸಲು ಕ್ರಮ ತೆಗೆದುಕೊಂಡಿದ್ದಾರೆ. ರಾಹುಲ್ ಭೈಯಾ (ಅಣ್ಣ) …ನೀವು ರಜೆಯ ಮೇಲಿದ್ರಿ, ಅದಕ್ಕೆ ನಿಮಗೆ ಗೊತ್ತಿಲ್ಲ” ಎಂದು ಷಾ ಉದ್ಗರಿಸಿದರು.
ಫೆಬ್ರವರಿ 17 ರಂದು ಪುದುಚೆರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಮೀನುಗಾರರು ಸಮುದ್ರದ ರೈತರಿದ್ದ ಹಾಗೆ. ಅವರ ಅಗತ್ಯಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಸಚಿವಾಲಯ ಇರಬೇಕು ಎಂದು ಉದ್ದ ಭಾಷಣ ಮಾಡಿ ಜನರ ಚಪ್ಪಾಳೆ ಗಿಟ್ಟಿಸಿದ್ದರು. ಅದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗಿದ್ದು, ಖುದ್ದು ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಅವರೇ ‘2019 ರಲ್ಲೇ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ ಸಚಿವಾಲಯವನ್ನು ಕೇಂದ್ರ ಸರ್ಕಾರ ರಚಿಸಿದೆ. ನಾನು ಮೀನುಗಾರಿಕೆ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ’ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ‘ಧೈರ್ಯವಿದ್ದರೆ ಕಿಸಾನ್ ಬಾತ್, ಜಾಬ್ ಕಿ ಬಾತ್ ಮಾಡಿ’ ಮೋದಿಗೆ ಸವಾಲೆಸೆದ ರಾಹುಲ್ ಗಾಂಧಿ
ಕಾಂಗ್ರೆಸ್ನತ್ತ ನೇರ ಬೆಟ್ಟು ಮಾಡಿದ ಅಮಿತ್ ಷಾ, “ಪುದುಚೆರಿ ಜನರನ್ನು ನಾನು ಕೇಳುತ್ತೇನೆ.. ನಾಲ್ಕು ಅವಧಿಗಳಿಂದ ಲೋಕಸಭೆಯಲ್ಲಿದ್ದು ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಮೀನುಗಾರಿಕೆ ಇಲಾಖೆ ಬಗ್ಗೆ ಗೊತ್ತಿಲ್ಲದ ನಾಯಕನನ್ನು ಹೊಂದಿರುವ ಪಕ್ಷ…. ಪುದುಚೆರಿಯ ಏಳಿಗೆಯನ್ನು ನೋಡಿಕೊಳ್ಳಬಹುದೇ ?” ಎಂದು ಪ್ರಶ್ನಿಸಿದರು.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
“ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”
ಎಲ್ಪಿಜಿ ಗ್ರಾಹಕರಿಗೆ ಸಿಹಿಸುದ್ದಿ : ಸಿಲಿಂಡರ್ಗಾಗಿ ಕಾಯುವ ಪಾಡು ತಪ್ಪಲಿದೆ