ಕೊಚ್ಚಿ: ತಂತ್ರಜ್ಞಾನ ಮುಂದುವರೆದಂತೆಲ್ಲಾ ಹೆಚ್ಚು ಹೆಚ್ಚು ದೌರ್ಜನ್ಯ, ಮೋಸ ಪ್ರಕರಣಗಳು ಬೆಳೆಯುತ್ತಲೇ ಸಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣ ಇಡೀ ಜಗತ್ತನ್ನು ಎಷ್ಟು ಹತ್ತಿರ ಮಾಡುತ್ತಿದೆಯೋ, ಅಷ್ಟೇ ಅಪಾಯಕಾರಿಯಾಗಿಯೂ ಗುರುತಿಸ್ಪಡುತ್ತಿದೆ, ಸೈಬರ್ ಕ್ರೈಂಗಳ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಬೇಕು. ಏಕೆಂದರೆ, ವೇಷ ಮರೆಸಿಕೊಂಡು ವಂಚಿಸುವ ಬಹುತೇಕರಿದ್ದಾರೆ. ಒಮ್ಮೆ ಯಾಮಾರಿದಾರೆ ಏನಾಗಬಹುದು ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಕೇರಳ ಮೂಲದ ಮಹಿಳೆಯೊಬ್ಬಳು ಪ್ರೀತಿಯ ನಾಟಕವಾಡಿ, ಯುವಕನೊಬ್ಬನನ್ನು ಲಾಡ್ಜ್ಗೆ ಕರೆಸಿಕೊಂಡು, ತನ್ನ ಮೂವರು ಫ್ರೆಂಡ್ಸ್ ಜೊತೆ ಸೇರಿ, ಯುವಕನ ಮೊಬೈಲ್ ಫೋನ್, ಹಣ ಮತ್ತು ಒಡವೆಯನ್ನು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವಕ ಕೊಟ್ಟಾಯಂನ ವೈಕ್ಕೊಮ್ ನಿವಾಸಿ. ಈತ ಹನಿಟ್ರ್ಯಾಪ್ನ ಸಂತ್ರಸ್ತನಾಗಿದ್ದಾನೆ. ಸಂತ್ರಸ್ತ ಎರ್ನಾಕುಲಂ ಕೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ವಿವರಣೆಗೆ ಬರುವುದಾದರೆ, ಸಂತ್ರಸ್ತ ಯುವಕನಿಗೆ ಆರೋಪಿ ಮಹಿಳೆ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದಳು. ಇಬ್ಬರು ನಿರಂತರವಾಗಿ ಮಾತನಾಡುತ್ತಾ ತುಂಬಾ ಹತ್ತಿರವಾಗಿದ್ದರು. ಇದೇ ಸಲುಗೆಯಲ್ಲಿ ಮಹಿಳೆಯು, ಯುವಕನನ್ನು ಎರ್ನಾಕುಲಂ ಜನರಲ್ ಹಾಸ್ಪಿಟಲ್ ಬಳಿಯಿರುವ ಲಾಡ್ಜ್ಗೆ ಆಗಸ್ಟ್ 8ರಂದು ಕರೆದಿದ್ದಳು. ಆಕೆಯ ಮಾತು ನಂಬಿದ ಯುವಕ ಅಂದು ಲಾಡ್ಜ್ನ ರೂಮ್ ನಂಬರ್ 205ಕ್ಕೆ ತೆರಳಿದ್ದ. ಕೊಠಡಿಯ ಒಳಗೆ ಹೋಗುತ್ತಿದ್ದಂತೆ ಮಹಿಳೆಯ ಮೂವರು ಫ್ರೆಂಡ್ಸ್ ಯುವಕನನ್ನು ಹಿಡಿದುಕೊಂಡು ಕುರ್ಚಿಗೆ ಕಟ್ಟಿಹಾಕಿದ್ದಾರೆ. ಬಾಯಿಗೆ ಬಟ್ಟೆ ತುರುಕಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಯುವಕನ ಕತ್ತಿನಲ್ಲಿ ಚಿನ್ನದ ಸರ, ಬ್ರೇಸ್ಲೆಟ್, ರಿಂಗ್ ಮತ್ತು 20 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ಫೋನ್ ಮತ್ತು ಪಾಕೆಟ್ನಲ್ಲಿದ್ದ 5 ಸಾವಿರ ರೂ. ನಗದು ದೋಚಿದ್ದಾರೆ. ಇಷ್ಟೇ ಅಲ್ಲದೆ, ಆತನ ಫೋನ್ ಬಳಸಿಕೊಂಡು ಬಲವಂತವಾಗಿ ಆತನ ಬ್ಯಾಂಕ್ ಖಾತೆಯಿಂದ 15 ಸಾವಿರ ರೂಪಾಯಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಹಲ್ಲೆಯಿಂದಾಗಿ ಯುವಕನ ಮೈಮೇಲೆ ತುಂಬಾ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಳಿಕ ಆಗಸ್ಟ್ 13 ರಂದು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಲಾಡ್ಜ್ನಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಹಣ ವರ್ಗಾವಣೆಯಾಗಿರುವ ಖಾತೆಯ ಮೂಲಕ ಆರೋಪಿಗಳ ಸುಳಿವು ಪಡೆಯಲು ಪೊಲೀಸರು ಯತ್ನಿಸುತ್ತಿದ್ದಾರೆ. (ಏಜೆನ್ಸೀಸ್)
ನಿಜವಾಯ್ತು ಈಕೆ ನುಡಿದ ಭವಿಷ್ಯವಾಣಿ: ಸೆಲೆಬ್ರಿಟಿಗಳಿಗೆ ನಡುಕ ಹುಟ್ಟಿಸಿದ ಹೊಸ ತಲೆಮಾರಿನ ಬಾಬಾ ವಾಂಗಾ
KRS ಡ್ಯಾಂ ಮೇಲೆ ಫೋಟೋಶೂಟ್ ಮಾಡಿಸಿದ ಸಂಸದೆ ವಿರುದ್ಧ ಶಾಸಕ ಗರಂ! ಕಾನೂನು ಎಲ್ಲರಿಗೂ ಒಂದೇ ಕ್ರಮ ಕೈಗೊಳ್ಳಿ…
ಕೇವಲ 500 ರೂ.ಗಾಗಿ ಸಹ ಗ್ರಾಮಸ್ಥನ ತಲೆಯನ್ನೇ ತುಂಡರಿಸಿದ ವ್ಯಕ್ತಿ: 25 ಕಿ.ಮೀ ನಡೆದು ಠಾಣೆಗೆ ತೆರಳಿ ಶರಣು