More

    ಯುವ ವೈದ್ಯೆ ವಿಸ್ಮಯ ಸಾವು ಪ್ರಕರಣ: ಪತಿಗೆ 10 ವರ್ಷ ಶಿಕ್ಷೆ, 12.5 ಲಕ್ಷ ದಂಡ ವಿಧಿಸಿದ ಕೋರ್ಟ್​

    ಕೊಲ್ಲಂ: ಇಡೀ ಕೇರಳ ರಾಜ್ಯವೇ ಕಂಬನಿ ಮಿಡಿದಿದ್ದ ಯುವ ವೈದ್ಯೆ ವಿಸ್ಮಯ ಸಾವಿನ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಪತಿ ಕಿರಣ್​ ಕುಮಾರ್​ಗೆ 10 ವರ್ಷ ಜೈಲು ಶಿಕ್ಷೆ ಹಾಗೂ 12.5 ಲಕ್ಷ ದಂಡವನ್ನು ವಿಧಿಸಿ ಕೊಲ್ಲಂನ ಹೆಚ್ಚುವರಿ ಸೆಷನ್ಸ್​ ಕೋರ್ಟ್​ ನ್ಯಾಯಾಧೀಶ ಕೆ.ಎನ್​. ಸುಜೀತ್​ ಆದೇಶ ಹೊರಡಿಸಿದ್ದಾರೆ. ಈ ಮೂಲಕ ವಿಸ್ಮಯ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯ ದೊರಕಿದೆ.

    ಕಿರಣ್​ಗೆ ಮೂರು ಸೆಕ್ಷನ್‌ (ಐಪಿಸಿ 304-ಹತ್ತು ವರ್ಷ, 306-ಆರು ವರ್ಷ, 498-ಎರಡು ವರ್ಷ) ಅಡಿಯಲ್ಲಿ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲ ಪ್ರಕರಣಗಳಲ್ಲಿ ಕಿರಣ್​ ಒಟ್ಟಿಗೆ ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಇದಲ್ಲದೆ 12.5 ಲಕ್ಷ ದಂಡ ಪಾವತಿಸಬೇಕಿದೆ. ಇದರಲ್ಲಿ ಎರಡು ಲಕ್ಷ ರೂ. ಅನ್ನು ವಿಸ್ಮಯ ಪೋಷಕರಿಗೆ ನೀಡಲಾಗುವುದು.

    ನ್ಯಾಯಾಲಯ ತೀರ್ಪಿನ ಬಗ್ಗೆ ಮಾತನಾಡಿರುವ ವಿಸ್ಮಯ ತಂದೆ ತ್ರಿವಿಕ್ರಮ್​ ನಾಯರ್​, ಶಿಕ್ಷೆ ವಿಧಿಸಿರುವುದು ಸಮಾಧಾನ ತಂದಿದೆ ಎಂದಿದ್ದಾರೆ. ಪೊಲೀಸರು ಹಾಗೂ ಪ್ರಾಸಿಕ್ಯೂಷನ್ ಮತ್ತು ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಜೀವಾವಧಿ ಶಿಕ್ಷೆಯ ನಿರೀಕ್ಷೆಯಲ್ಲಿದ್ದು ತೀರ್ಪಿನಿಂದ ನಿರಾಸೆಯಾಗಿದೆ ಎಂದು ಆಕೆಯ ತಾಯಿ ಸರಿತಾ ಹೇಳಿದ್ದಾರೆ. ಉನ್ನತ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

    ಶಿಕ್ಷೆಯನ್ನು ಪ್ರಕಟಿಸುವ ಮೊದಲು, ನ್ಯಾಯಾಲಯವು ಕಿರಣ್‌ಗೆ ಏನಾದರೂ ಹೇಳಲು ಇದೆಯೇ ಎಂದು ಕೇಳಿತು. ಪ್ರತಿಕ್ರಿಯಿಸಿದ ಕಿರಣ್​, ನಾನು ಯಾವುದೇ ಅಪರಾಧ ಮಾಡಿಲ್ಲ. ವಿಸ್ಮಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಹೆತ್ತವರಿಗೆ ಆರೋಗ್ಯ ಸಮಸ್ಯೆಗಳಿವೆ. ನಾನು ಕುಟುಂಬದ ಏಕೈಕ ಅನ್ನದಾತ. ನನ್ನ ವಯಸ್ಸು ಕೇವಲ 31. ನನ್ನ ವಯಸ್ಸನ್ನು ಪರಿಗಣಿಸಿ ನನ್ನ ಶಿಕ್ಷೆಯನ್ನು ತಗ್ಗಿಸಬೇಕು ಎಂದು ಕೇಳಿಕೊಂಡಿದ್ದಾರೆ.

    ಕಿರಣ್​ ವಿರುದ್ಧ ಪ್ರಮುಖ ನಿರ್ಣಯ ತೆಗೆದುಕೊಳ್ಳಕ್ಕೆಂದು ವಿಸ್ಮಯ ಪರ ವಕೀಲರು ವಾದಿಸಿರು. ಇದು ಓರ್ವ ವ್ಯಕ್ತಿಯ ವಿರುದ್ಧದ ಪ್ರಕರಣವಲ್ಲ, ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧದ ಪ್ರಕರಣ ಎಂದು ಪ್ರಾಸಿಕ್ಯೂಷನ್ ವಾದಿಸಿತು. ಸರ್ಕಾರಿ ನೌಕರನೊಬ್ಬ ವರದಕ್ಷಿಣೆ ಸ್ವೀಕರಿಸಿದ್ದನ್ನು ನ್ಯಾಯಾಲಯ ಪರಿಗಣಿಸಬೇಕು. ಸರ್ಕಾರಿ ನೌಕರನು ತಾನು ಮೌಲ್ಯಯುತ ವ್ಯಕ್ತಿ ಎಂದು ನಂಬಬಾರದು. ತೀರ್ಪು ಸಮಾಜಕ್ಕೆ ಪಾಠವಾಗಬೇಕು. ವರದಕ್ಷಿಣೆ ಹೆಸರಿನಲ್ಲಿ ಕ್ರೂರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ವಿಸ್ಮಯ ಆತ್ಮಹತ್ಯೆಯು ಕೊಲೆಗೆ ಸಮವಾಗಿದೆ. ಅಲ್ಲದೆ, ಆರೋಪಿಗೆ ಯಾವುದೇ ಪಶ್ಚಾತಾಪವಿಲ್ಲ. ಆತನ ಮೇಲೆ ಸಹಾನುಭೂತಿ ಹೊಂದಬಾರದು ಎಂದು ವಾದಿಸಿದರು.

    ವಿಸ್ಮಯಳ ಮೊದಲ ಮರಣ ವಾರ್ಷಿಕೋತ್ಸವಕ್ಕೂ ಮುನ್ನವೇ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ನಿನ್ನೆ ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ ಕಿರಣ್​ನನ್ನು ಅಪರಾಧಿ ಎಂದು ಪರಿಗಣಿಸಿತು. ಶಿಕ್ಷೆಯನ್ನು ಪ್ರಮಾಣವನ್ನು ಇಂದು ಘೋಷಿಸಿದೆ. ಈ ಪ್ರಕರಣದಲ್ಲಿ 42 ಸಾಕ್ಷಿಗಳು, 120 ದಾಖಲೆಗಳು ಮತ್ತು 12 ಪ್ರಧಾನ ಸಾಕ್ಷಿಗಳಿವೆ. ಪ್ರಕರಣದ ವಿಚಾರಣೆ ಕಳೆದ ಜನವರಿ 10 ರಂದು ಪ್ರಾರಂಭವಾಯಿತು.

    ಪ್ರಕರಣ ಹಿನ್ನೆಲೆ ಏನು?
    ವಿಸ್ಮಯ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಗಂಡ ಕಿರಣ್​ ಕುಮಾರ್​ ಹಣ ದಾಹಕ್ಕೆ ಯುವ ವೈದ್ಯೆ ಸಾವಿನ ಹಾದಿ ಹಿಡಿದಳು. ಅದಕ್ಕೂ ಮುಂಚೆ ಗಂಡನ ಅಸಲಿ ಮುಖವಾಡವನ್ನು ಮೃತ ವೈದ್ಯೆ ಬಿಚ್ಚಿಟ್ಟಿದ್ದಳು. ಅಷ್ಟಕ್ಕೂ ಆಕೆಯ ಗಂಡ ಅನಾಗರಿಕನೇನಲ್ಲ. ಆದರೆ, ಆತ ಮಾಡಿದ ಕೆಲಸ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು, ವೃತ್ತಿಯಲ್ಲಿ ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ. ಒಳ್ಳೆಯ ಉದ್ಯೋಗ, ಕೈತುಂಬ ಸಂಬಳ ಪಡೆಯುತ್ತಿದ್ದರೂ ಆತನ ಅತಿಯಾದ ದುರಾಸೆ ಯುವ ವೈದ್ಯೆಯ ಪ್ರಾಣವನ್ನೇ ಕಸಿದುಕೊಂಡಿತು. ಅದಕ್ಕೆ ಶಿಕ್ಷೆಯಾಗಿ ಕೇರಳ ಸರ್ಕಾರ ಆರೋಪಿಯ ಸರ್ಕಾರಿ ಕೆಲಸವನ್ನೇ ಕಸಿದುಕೊಂಡು ಕಂಬಿ ಹಿಂದೆ ತಳ್ಳಿತ್ತು.

    2020ರ ಮೇ ತಿಂಗಳಲ್ಲಿ ವಿಸ್ಮಯ ಮತ್ತು ಕಿರಣ್​ ಇಬ್ಬರು ಮದುವೆ ಆಗಿದ್ದರು. ವಿಸ್ಮಯಳ ಮದುವೆಯನ್ನ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ದಂಪತಿ ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಆದರೆ, ಗಂಡನ ಹಣದಾಹ ಮತ್ತು ಕಿರುಕುಳ ಸಹಿಸದೇ 2021 ಜೂನ್​ 21ರ ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿಯೇ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದೇಹದ ಮೇಲೆ ಗಾಯದ ಗುರುತುಗಳಾಗಿತ್ತು. ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಸಾವಿಗೂ ಮುನ್ನ ಅಂದರೆ ಭಾನುವಾರ ರಾತ್ರಿ ವಾಟ್ಸ್ಆ್ಯಪ್​ ಮತ್ತು ಫೇಸ್​ಬುಕ್​ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್​ ಮಾಡಿದ್ದ ವಿಸ್ಮಯ, ಬಹುಶಃ ಇದೇ ನನ್ನ ಕೊನೇ ಮೆಸೇಜ್​ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದರು. ಗಂಡ ಹಿಂಸೆ ನೀಡಿರುವ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು.

    ಇಡೀ ರಾಜ್ಯ ಕಂಬನಿ ಮಿಡಿದಿದ್ದ ವಿಸ್ಮಯ ಸಾವು ಪ್ರಕರಣ: 9 ತಿಂಗಳ ನಂತ್ರ ಸ್ಫೋಟಕ ಆಡಿಯೋ ಬಹಿರಂಗ!

    ರಾಜ್ಯವೇ ಕಂಬನಿ ಮಿಡಿದಿದ್ದ ವಿಸ್ಮಯ ಸಾವು ಪ್ರಕರಣ: ಪೊಲೀಸ್​ ಚಾರ್ಜ್​ಶೀಟ್​ನಲ್ಲಿ ಗಂಡನ ಕರಾಳ ಮುಖ ಬಯಲು!

    ವಿಸ್ಮಯ ದುರಂತ ಸಾವು ಪ್ರಕರಣ: ಸರ್ಕಾರಿ ಕೆಲಸ ಕಳೆದುಕೊಂಡ ಹಣದಾಹಿ ಗಂಡ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts