ತುಮಕೂರು: ಕ್ಷುಲ್ಲಕ ವಿಚಾರಕ್ಕೆ ಯುವಕನ ಮೂಳೆ ಮುರಿಯುವ ಮೂಲಕ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ದರ್ಪ ಮೆರೆದಿದ್ದು, ಸಂತ್ರಸ್ತ ಯುವಕ ಸಾವು-ಬದುಕಿನ ನಡುವೆ ನರಳಾಡುವಂತಾಗಿದೆ.
ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್ ಠಾಣೆಯ ಲೇಡಿ ಪಿಎಸ್ಐ ವಿಜಯಕುಮಾರಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವ ಆರೋಪ ಕೇಳಿಬಂದಿದೆ. ಅವರು ಆಡಿದ್ದೆ ಆಟ, ಹಾಕಿದ್ದೆ ಕೇಸ್ ಎನ್ನುವಂತಹ ಪರಿಸ್ಥಿತಿ ಇದೆಯಂತೆ. ಹಣ ಕೊಟ್ರೆ ಮೂಳೆನು ಮುರಿತಾರೆ ಹಾಗೂ ಪ್ರಕರಣವನ್ನು ತಿರುಚುತ್ತಾರೆ ಎಂಬ ಸಾಲು ಸಾಲು ಗಂಭೀರ ಆರೋಪ ವಿಜಯಕುಮಾರಿ ವಿರುದ್ಧ ಕೇಳಿಬಂದಿದೆ.
ಇದೀಗ ಕ್ಷುಲ್ಲಕ ವಿಚಾರಕ್ಕೆ ಯುವಕನ ಮೂಳೆ ಮುರಿದು ಕಿರುಕುಳ ನೀಡಿದ್ದಾರೆ. ಮನಬಂದಂತೆ ಥಳಿಸಿ ಬೆನ್ನು ಮುಳೆ ಮುರಿದಿರುವ ಆಪಾದನೆ ಕೇಳಿಬಂದಿದೆ. ಯುವಕ ಮಣಿಕಂಠ ಸಾವು ಬದುಕಿನ ನಡುವೆ ನರಳಾಡುತ್ತಿದ್ದಾರೆ. ಮಣಿಕಂಠ ಗುಬ್ಬಿ ತಾಲ್ಲೂಕಿನ ಕೊಡಿಯಾಳ ಗ್ರಾಮದ ನಿವಾಸಿ. ಬೀದಿಯಲ್ಲಿನ ಕೊಳಾಯಿ(ನಲ್ಲಿ) ವಿಚಾರಕ್ಕೆ ಎರಡು ಯಲ್ಲಮ್ಮ, ಶಿವಮೂರ್ತಿ ಹಾಗೂ ಮಣಿಕಂಠ ತಂದೆ ಮುನಿಯಪ್ಪ ಎಂಬುವರ ನಡುವೆ ಗಲಾಟೆ ನಡೆದಿತ್ತು.
ಗಲಾಟೆ ಸಂಬಂಧ ಮಣಿಕಂಠನ ವಿರುದ್ಧ ಚೇಳೂರು ಪೊಲೀಸ್ ಠಾಣೆಗೆ ಯಲ್ಲಮ್ಮ ಮತ್ತು ಶಿವಮೂರ್ತಿ ದೂರು ನೀಡಿದ್ದರು. ಈ ವೇಳೆ ಮಣಿಕಂಠನನ್ನು ವಿಚಾರಣೆಗೆಂದು ಕರೆಸಿ, ಆತನ ಮೇಲೆ ಪಿಎಸ್ಐ ವಿಜಯಕುಮಾರಿ ಹಾಗೂ ಠಾಣಾ ಸಿಬ್ಬಂದಿ ಮನಬಂದಂತೆ ಥಳಿಸಿರುವ ಆರೋಪ ಎದುರಾಗಿದೆ.
ಥಳಿಸಿದ್ದಲ್ಲದೆ, ಮೂರು ದಿನ ಊಟ ಮತ್ತು ನೀರು ಕೊಡದೆ ಠಾಣೆಯಲ್ಲೇ ಕೂಡಿ ಹಾಕಿದ್ದರಂತೆ. ಪೊಲೀಸರ ಹೊಡೆತಕ್ಕೆ ಮಣಿಕಂಠನ ಬೆನ್ನು ಮೂಳೆ ಮುರಿದಿದ್ದು, 15 ದಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೂ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಇದರ ನಡುವೆ ಕೋರ್ಟ್ಗೆ ಹಾಜರುಪಡಿಸಿದ್ದ ವೇಳೆ ಸುಳ್ಳು ಹೇಳುವಂತೆ ಬೆದರಿಕೆ ಹಾಕಿದ್ದಾರೆ. ನ್ಯಾಯಾಧೀಶರ ಮುಂದೆ ನಿಜ ಹೇಳಿದ್ರೆ ಜಾಮೀನು ಅರ್ಜಿ ರದ್ದು ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಎದುರಾಳಿಗಳಿಂದ ಹಣ ಪಡೆದು ಈ ರೀತಿ ಕ್ಷುಲ್ಲಕ ವಿಚಾರಕ್ಕೆ ಮನಬಂದಂತೆ ಥಳಿಸಿದ್ದಾರೆಂದು ಪಿಎಸ್ಐ ವಿಜಯಕುಮಾರಿ ವಿರುದ್ಧ ಆರೋಪ ಮಾಡಲಾಗಿದ್ದು, ವಿಜಯಾಕುಮಾರಿ ಹಾಗೂ ಸಿಬ್ಬಂದಿ ಮತ್ತು ಎದುರಾಳಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಕೊಡಿಸುವಂತೆ ಮಣಿಕಂಠನ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ಶಿವಾಜಿ ಜಯಂತಿಯಂದು ಖಡ್ಗ ಹಿಡಿದು ನಿಷೇಧಾಜ್ಞೆ ಪ್ರದೇಶದಲ್ಲಿ ಬೈಕ್ ರ್ಯಾಲಿ: 8 ಯುವಕರ ವಿರುದ್ಧ FIR ದಾಖಲು
ಜಾಮೀನು ಕೊಟ್ಟ ಜಡ್ಜ್ಗೆ ತರಬೇತಿ ನೀಡಿ!; ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಕಾರ್ಯವೈಖರಿಗೆ ಹೈಕೋರ್ಟ್ ಟೀಕೆ