ಮೆಲ್ಬೋರ್ನ್: ಇಂದಿನಿಂದ ಟಿ20 ವಿಶ್ವಕಪ್ ಪಂದ್ಯವಳಿ ಆಸ್ಟ್ರೇಲಿಯಾದಲ್ಲಿ ಆರಂಭವಾಗಿದೆ. ಇಂದು ನಡೆದ ಮೊದಲ ಪಂದ್ಯದಲ್ಲೇ ಬಲಿಷ್ಠ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ನಮೀಬಿಯಾ ತಂಡ ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಆದರೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮುಂದಿನ ಭಾನವಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಅಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಎದುರು ನೋಡುತ್ತಿರುವ ಅಭಿಮಾನಿಗಳಿ ಇದೀಗ ನಿರಾಸೆಯಾಗುವಂತಹ ಸುದ್ದಿಯೊಂದು ವರದಿಯಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರದ್ದಾಗುವ ಭೀತಿ ಆವರಿಸಿದೆ. ಏಕೆಂದರೆ, ಆರಂಭಿಕ ಹವಾಮಾನ ಮುನ್ಸೂಚನೆಯ ಪ್ರಕಾರ ಅ.23ರ ಭಾನುವಾರ ಮಳೆಯೊಂದಿಗೆ ತಂಪಾದ ಮತ್ತು ಆರ್ದ್ರ ದಿನವಾಗಿದೆ. ಈ ದಿನ ಮಳೆ ಬರುವ ಸಾಧ್ಯತೆ ಶೇ. 70 ರಷ್ಟಿದ್ದರೆ, ಅದೇ ಸಂಜೆ ಮಳೆ ಬರುವ ಸಾಧ್ಯತೆ ಶೇ.60ರಷ್ಟಿದೆ. ಪಂದ್ಯದ ನಡುವೆಯೇ ಮಳೆ ಬರುವ ಸಾಧ್ಯತೆ ದಟ್ಟವಾಗಿರುವುದರಿಂದ ಪಂದ್ಯ ರದ್ದಾಗುವ ಸಾಧ್ಯತೆಯು ಇದೆ.
ಈ ಕೆಟ್ಟ ಸುದ್ದಿಯನ್ನು ಕೇಳಿ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮಳೆಯಿಂದ ರದ್ದಾಗುವ ಪಂದ್ಯವು ಉಭಯ ತಂಡಗಳಿಗೆ ಕೆಟ್ಟ ಫಲಿತಾಂಶ ನೀಡಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ಒಂದು ವೇಳೆ ಪಂದ್ಯ ರದ್ದಾದರೆ, ಭಾರತಕ್ಕೆ ಏನಾದರೂ ಲಾಭವಾಗಲಿದೆಯೇ ಎಂದು ಯೋಚನೆ ಮಾಡುತ್ತಿದ್ದಾರೆ. ಆದರೆ, ಈಗಾಗಲೇ ಮುಂಗಡವಾಗಿ ಟಿಕೆಟ್ ಬುಕ್ ಮಾಡಿ, ಪಂದ್ಯ ಕಣ್ತುಂಬಿಕೊಳ್ಳಲು ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಈ ಸುದ್ದಿ ನಿರಾಸೆ ಉಂಟು ಮಾಡಿರುವುದಂತೂ ಸುಳ್ಳಲ್ಲ. ದೇವರೇ ಮಳೆ ಬರದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇಂತಹ ಪಂದ್ಯ ಸಿಗುವುದೇ ತುಂಬಾ ಅಪರೂಪ. ಇಂತಹ ಸಮಯದಲ್ಲಿ ಮಳೆ ಬಂದರೆ, ನಿಜಕ್ಕೂ ಇದ್ದು ದೊಡ್ಡ ನಿರಾಸೆಯೇ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ಭಾರತ ತಂಡ ಶನಿವಾರ ಪರ್ಥ್ನಿಂದ ಬ್ರಿಸ್ಬೇನ್ಗೆ ತಲುಪಿದ್ದಾರೆ. ಕ್ರಮವಾರ ಅ.17 ಮತ್ತು 19ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯ ಇರುವುದರಿಂದ ಭಾರತ ತಂಡ ಈಗಾಗಲೇ ತರಬೇತಿಯಲ್ಲಿ ತೊಡಗಿಕೊಂಡಿದೆ. ಗಾಯದಿಂದ ಅಲಭ್ಯರಾದ ಜಸ್ಪ್ರಿತ್ ಬೂಮ್ರಾ ಅವರ ಸ್ಥಾನಕ್ಕೆ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಲಾಗಿದೆ. ಶಮಿ ಕೂಡ ಬ್ರಿಸ್ಬೇನ್ ತಲುಪಿದ್ದು, ಭಾನುವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪಂದ್ಯವನ್ನು ಗೆಲ್ಲುವ ಸಾಧ್ಯತೆಗಳ ವಿಷಯದಲ್ಲಿ, ಭಾರತವು ಆರಂಭಿಕ ಫೇವರಿಟ್ ಆಗಿದೆ. ಶೇ. 100ರಲ್ಲಿ ಪಾಕಿಸ್ತಾನ ಪರ ಶೇ. 37 ಹಾಗೂ ಭಾರತದ ಪರ ಶೇ. 63ರಷ್ಟು ಒಲವಿದೆ.
ಅಂದಹಾಗೆ ಇಂದು ನಡೆದ ನಮೀಬಿಯಾ vs ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಲಂಕಾ, ನಮೀಬಿಯಾ ವಿರುದ್ಧ ಹೀನಾಯ ಸೋಲು ಕಂಡಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನಮೀಬಿಯಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಲಂಕಾ 19 ಓವರ್ಗಳಲ್ಲಿ 108 ರನ್ಗೆ ಸರ್ವಪತನ ಕಂಡಿತು. (ಏಜೆನ್ಸೀಸ್)
ರಶ್ಮಿಕಾ ಮಂದಣ್ಣ ಹೊಸ ಫೋಟೋಶೂಟ್: ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಕಿರಿಕ್ ಬ್ಯೂಟಿಯ ಹಾಟ್ ಅವತಾರಗಳು
ಭಾರಿ ಮಳೆಯಿಂದ ರಸ್ತೆಗೆ ಹಾನಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾಹನ ಸಂಚಾರ ಸ್ಥಗಿತ
ಹಾಸನ ಭೀಕರ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ