ಹೈದರಾಬಾದ್: ನಿನ್ನೆ (ಜುಲೈ 29) ಟಾಲಿವುಡ್ನಲ್ಲಿ ನಟ ರವಿತೇಜ ಅಭಿನಯದ “ರಾಮರಾವ್ ಆನ್ ಡ್ಯೂಟಿ” ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ನೋಡಿದವರು ತೆರೆಯ ಮೇಲೆ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಅವರನ್ನು ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ. ಅದಕ್ಕೆ ಕಾರಣ ಅವರಿಬ್ಬರ ಪಾತ್ರ.
ವಿವರಣೆಗೆ ಬರುವ ಮುನ್ನ ಒಂದು ಫ್ಲ್ಯಾಶ್ಬ್ಯಾಕ್ ಹೇಳಿ ಬಿಡುತ್ತೇನೆ. ಈಗಾಗಲೇ ನರೇಶ್ ಕುಟುಂಬದ ಜಗಳ ಬೀದಿಗೆ ಬಂದಿರುವುದು ಎಲ್ಲರಿಗೂ ತಿಳಿದಿದೆ. ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ನಡುವೆ ಅಕ್ರಮ ಸಂಬಂಧ ಇದೆ ಎಂದು ನರೇಶ್ ಅವರ ಮೂರನೇ ಪತ್ನಿ ರಮ್ಯಾ ಆರೋಪ ಮಾಡಿದ್ದಾರೆ. ನರೇಶ್ ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರ ಮಲ ಮಗ. ಕೃಷ್ಣ ಅವರು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಂದೆ. ನರೇಶ್ ಮತ್ತು ಪವಿತ್ರಾ ಇಬ್ಬರು ಮದುವೆ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆ ನನಗೆ ವಂಚಿಸಿದ್ದಾರೆ ಮತ್ತು ಸಾಕಷ್ಟು ಕಿರುಕುಳ ನೀಡಿದ್ದಾರೆಂದು ರಮ್ಯಾ, ನರೇಶ್ ವಿರುದ್ಧ ಆರೋಪ ಮಾಡಿದ್ದಾರೆ.
ಅದಕ್ಕೆ ಪುಷ್ಠಿ ನೀಡುವಂತೆ ಮೈಸೂರು ಇದೇ ತಿಂಗಳ ಆರಂಭದಲ್ಲಿ ಅಂದರೆ, ಜುಲೈ 2ರಂದು ರಾತ್ರಿ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಹೋಟೆಲ್ ಒಂದರಲ್ಲಿ ಒಂದೇ ಕೋಣೆಯಲ್ಲಿ ನರೇಶ್ ಮತ್ತು ಪವಿತ್ರ ಲೋಕೇಶ್ ಉಳಿದುಕೊಂಡಿದ್ದರು. ಇಡೀ ರಾತ್ರಿ ಒಂದೇ ರೂಮಿನಲ್ಲಿ ಇದ್ದರು. ಈ ವಿಚಾರ ರಮ್ಯಾ ಅವರಿಗೆ ತಿಳಿದು ಹೋಟೆಲ್ಗೆ ಬಂದು ಜಗಳವಾಡಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಇಬ್ಬರ ನಡುವಿನ ಸಂಬಂಧಕ್ಕೆ ಮೈಸೂರಿನ ಘಟನೆ ಸಾಕ್ಷಿಯಾಗಿತ್ತು.
ಇದೀಗ ಅಸಲಿ ವಿಚಾರಕ್ಕೆ ಬರೋಣ. ರಾಮರಾವ್ ಆನ್ ಡ್ಯೂಟಿ ಚಿತ್ರದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರದ್ದು ಒಡಹುಟ್ಟಿದವರ ರೀತಿಯ ಪಾತ್ರ. ಇಬ್ಬರು ಸಹೋದರ ಮತ್ತು ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವಿತ್ರಾ, ರವಿತೇಜ ತಾಯಿಯಾಗಿ ನಟಿಸಿದ್ದರೆ, ನರೇಶ್ ನಾಯಕಿ ದಿವ್ಯಾಂಶ ಕೌಶಿಕ್ ತಂದೆಯಾಗಿ ನಟಿಸಿದ್ದಾರೆ. ನರೇಶ್, ರವಿತೇಜಾಗೆ ಸೋದರಮಾವನಾಗಬೇಕು.
ಯಾವಾಗ ನರೇಶ್ ಮತ್ತು ಪವಿತ್ರಾ ಲೋಕೇಶ್ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೋ ಆಗ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ. ಅವರ ನಿಜ ಜೀವನದ ಸಂಬಂಧಕ್ಕೂ ತೆರೆಯ ಮೇಲೆ ಕಾಣಿಸಿಕೊಂಡಿರುವುದಕ್ಕೂ ಒಂದಕ್ಕೊಂದು ತುಂಬಾ ವ್ಯತ್ಯಾಸವಿದೆ. ಇಬ್ಬರ ನಡುವಿನ ಸಂಬಂಧ ಜಗಜ್ಜಾಹೀರಾಗಿರುವುದು ಪ್ರೇಕ್ಷಕರ ಮನದಲ್ಲಿ ಅಚ್ಚಾಗಿರುವುದರಿಂದ ರಾಮರಾವ್ ಆನ್ ಡ್ಯೂಟಿ ಸಿನಿಮಾ ಸಂದರ್ಭದಲ್ಲಿ ನರೇಶ್-ಪವಿತ್ರಾ ಸಂಬಂಧವನ್ನು ಪ್ರೇಕ್ಷಕ ಮಹಾಪ್ರಭು ಒಪ್ಪಿಕೊಂಡಿಲ್ಲ. (ಏಜೆನ್ಸೀಸ್)
ರಶ್ಮಿಕಾ ನನ್ನ ಡಾರ್ಲಿಂಗ್; ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದ ದೇವರಕೊಂಡ