ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ರೇಪ್ ಪ್ರಕರಣವೂ ಇಡೀ ಮೈಸೂರಿಗರನ್ನು ಬೆಚ್ಚಿಬೀಳಿಸಿದೆ. ಘಟನೆ ನಡೆದು ಸಾಕಷ್ಟು ಸಮಯ ಕಳೆದರು ಆರೋಪಿಗಳ ಸುಳಿವು ಪತ್ತೆಯಾಗದೇ ಇರುವುದು ಮೈಸೂರು ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಕಾರಣವಾಗಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರು ಚಾಮುಂಡಿ ಬೆಟ್ಟದ ಆಸು-ಪಾಸು ನಡೆಯುವ ಅನೈತಿಕ ಚಟುವಟಿಕೆಗಳು ಹಾಗೂ ಪೊಲೀಸರ ವೈಫಲ್ಯಗಳ ಬಗ್ಗೆ ತಿಳಿಸಿದ್ದಾರೆ.
ದಿಗ್ವಿಜಯ ನ್ಯೂಸ್ ಜತೆ ದೂರವಾಣಿಯಲ್ಲಿ ಮಾತನಾಡಿದ ಸಂಗ್ರಾಮ್ ಸಿಂಗ್, ದೇವರ ದರ್ಶನ ಮಾಡಲು ಹೋಗುವಂತಹ ಒಂದು ಪುಣ್ಯ ಕ್ಷೇತ್ರದಲ್ಲಿ ಕೆಟ್ಟ ಕೃತ್ಯಗಳು ನಡೆಯುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಅಲ್ಲಿ ನಡೆಯುವ ಕೃತ್ಯಗಳ ಬಗ್ಗೆ ಈ ಮೊದಲು ಇದ್ದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಗೆ ಹೇಳಿದ್ದೆ ಆದರೆ, ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎಂದರು.
ನಾನು ಚಾಮುಂಡಿ ಬೆಟ್ಟಕ್ಕೆ ಆಗಾಗ ಭೇಟಿ ನೀಡುತ್ತೇನೆ. ಏಳು ಗಂಟೆಯ ನಂತರ ನಂದಿ ವಿಗ್ರಹ ಇರುವ ಜಾಗಕ್ಕೆ ಹೋದರೆ ಹುಡಗ-ಹುಡುಗಿಯರು ಅರೆ ಬೆತ್ತಲೆಯಲ್ಲಿರುವ ದೃಶ್ಯಗಳೇ ಹೆಚ್ಚಾಗಿ ಕಾಣುತ್ತಿರುತ್ತವೆ. ಅಲ್ಲಿ ಹೇಳೋರು-ಕೇಳೋರು ಯಾರು ಇರುವುದಿಲ್ಲ. ಯಾವೊಬ್ಬ ಪೊಲೀಸ್ ಕೂಡ ಅಲ್ಲಿರುವುದಿಲ್ಲ. ಇದೇ ಅವಕಾಶವನ್ನು ಬಳಸಿಕೊಳ್ಳುವ ಕೆಲ ಪುಂಡ-ಪೋಕರಿಗಳು ಮಜಾ ಮಾಡಿಕೊಂಡು ಇರುತ್ತಾರೆ. ಇದನೆಲ್ಲ ನೋಡಿ ಗಮನಕ್ಕೂ ತಂದಿದ್ದೇನೆ. ಆದರೆ, ನಾವು ನಿವೃತ್ತ ಅಧಿಕಾರಿ ಆಗಿರುವುದರಿಂದ ನಮ್ಮ ಮಾತನ್ನು ಯಾರು ಕೇಳುವುದಿಲ್ಲ ಎಂದು ತಿಳಿಸಿದರು.
ಬೆಟ್ಟಕ್ಕೆ ಹೋಗುವಾಗ ಪ್ರವೇಶ ದ್ವಾರದಲ್ಲಿ ತಪಾಸಣೆ ವ್ಯವಸ್ಥೆಯೇ ಇಲ್ಲ. ಹೋಗಲಿ ಅಂದರೆ ಎಲ್ಲಿಯೂ ಸಿಸಿಟಿವಿ ವ್ಯವಸ್ಥೆಯೂ ಇಲ್ಲ. ಒಂದಷ್ಟು ಸಿಸಿಟಿವಿಗಳನ್ನು ಹಾಕಿದರೆ, ಇಂತಹ ಕೃತ್ಯಕ್ಕೆ ಕೊಂಚ ಕಡಿವಾಣ ಬೀಳುತ್ತದೆ. ಪ್ರವೇಶ ದ್ವಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಒಂದು ವೃತ್ತ ಸಿಗುತ್ತದೆ. ನಂಜನಗೂಡಿಗೆ ಹೋಗುವ ದಾರಿಯಲ್ಲಿ ಎರಡು ಸ್ಥಳಗಳಿವೆ. ಆ ಸ್ಥಳಗಳನ್ನು ನೋಡಿದರೆ, ಅವು ರೇಪ್ ಪ್ರಕರಣಗಳಿಗೆ ಹೇಳಿ ಮಾಡಿಸಿದಂತಿವೆ. ಇದೀಗ ಎಂಬಿಎ ವಿದ್ಯಾರ್ಥಿನಿ ಮೇಲಿನ ರೇಪ್ ಪ್ರಕರಣ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು. ಅಲ್ಲಿ ಯಾರು ಒಳಗಡೆ ಬರುತ್ತಾರೆ ಮತ್ತು ಹೊರಗಡೆ ಹೋಗುತ್ತಾರೆ ಎಂಬುದು ಗೊತ್ತಾಗುವುದೇ ಇಲ್ಲ. ಅಷ್ಟೊಂದು ಭಯಾನಕವಾಗಿದೆ ಈ ಸ್ಥಳ. ಹೀಗಾಗಿಯೇ ಇಂಥ ಕೃತ್ಯಗಳು ಹೆಚ್ಚಾಗುತ್ತಿವೆ ಎಂದರು.
ಕಾಲೇಜಿನ ಹುಡುಗರು ಮತ್ತು ಹುಡುಗಿಯರು ಅದರಲ್ಲೂ ಪಡ್ಡೆ ಹುಡುಗರು ಹುಡುಗಿಯರನ್ನು ಕರೆತಂದು ಏನು ಮಾಡಿದರೂ ಯಾರಿಗೂ ಗೊತ್ತಾಗುವುದಿಲ್ಲ. ಅಂತಾ ಒಂದು ಮೂರ್ನಾಲ್ಕು ಸ್ಥಳಗಳು ಅಲ್ಲಿವೆ. ಅಂತಹ ಸ್ಥಳಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಯಾರೊಬ್ಬರು ಆಗಾಗ ಭೇಟಿ ಮಾಡುವುದಿಲ್ಲ ಎಂದು ಪೊಲೀಸ್ ಇಲಾಖೆಯ ವೈಫಲ್ಯವನ್ನು ತೆರೆದಿಟ್ಟರು.
ಬೆಟ್ಟದಿಂದ ಇಳಿಯುವಾಗ ಒಂದು ಮಾರ್ಗ ಈಗ ಘಟನೆ ನಡೆದಿರುವ ಸ್ಥಳಕ್ಕೆ ಹೋಗುತ್ತದೆ. ಆ ಜಾಗದಲ್ಲಿ ತುಂಬಾ ಕತ್ತಲೆ ಇರುತ್ತದೆ. ಅದೊಂದು ರೀತಿಯಲ್ಲಿ ಡೆಡ್ ಫಾರೆಸ್ಟ್ ಆಗಿದೆ. ಈ ಸ್ಥಳಗಳ ಬಗ್ಗೆ ಮಾಹಿತಿ ಇದ್ದರೂ ಎಚ್ಚರವಹಿಸುವುದಿಲ್ಲ. ಪೊಲೀಸರು ಸರಿಯಾಗಿ ತಪಾಸಣೆ ನಡೆಸುವುದಿಲ್ಲ. ಬಗ್ಗೆ ಸಾಕಷ್ಟು ಹೇಳಿ ನಮಗೂ ಸಾಕಾಗಿ ಹೋಗಿದೆ ಎಂದರು.
ಇದೀಗ ಘಟನೆ ನಡೆದ 40 ಗಂಟೆಗೂ ಅಧಿಕ ಸಮಯವಾಗಿದೆ. ಆದರೆ, ಇದುವರೆಗೂ ಆರೋಪಿಗಳನ್ನು ಬಂಧಿಸುವುದು ಇರಲಿ, ಅವರ ಸುಳಿವನ್ನು ಪತ್ತೆ ಮಾಡಲು ಆಗಿಲ್ಲ. ಹೀಗಾಗಿ ಸಹಜವಾಗಿ ಪ್ರಶ್ನೆ ಮಾಡಬೇಕಾಗುತ್ತದೆ. ಮೈಸೂರಿಗೆ ತನ್ನದೆಯಾದ ಹೆಗ್ಗಳಿಕೆ ಇದೆ. ಇದು ಸಾಂಸ್ಕೃತಿಕ ನಗರ. ಇನ್ನೇನು ಕೆಲ ದಿನಗಳಲ್ಲಿ ದಸರಾ ಹಬ್ಬ ಬರುತ್ತದೆ. ಅಂತಹ ಸಂದರ್ಭದಲ್ಲಿ ನಡೆಯುವ ಕೃತ್ಯಗಳಿಗೆ ಹೇಗೆ ಕಡಿವಾಣ ಹಾಕುತ್ತಾರೋ ಗೊತ್ತಿಲ್ಲ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಕಳವಳ ವ್ಯಕ್ತಪಡಿಸಿದರು. (ದಿಗ್ವಿಜಯ ನ್ಯೂಸ್)
ಮೈಸೂರಲ್ಲಿ ಗ್ಯಾಂಗ್ ರೇಪ್: ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕಾಮುಕರು, ರಾತ್ರಿವರೆಗೂ ಕಾದು ಅಟ್ಟಹಾಸ ಮೆರೆದ್ರು…
ಪುಡಾರಿಗಳ ಅಡ್ಡೆಯಾದ ಚಾಮುಂಡಿ ಬೆಟ್ಟದ ತಪ್ಪಲು: ಗ್ಯಾಂಗ್ರೇಪ್ ಜಾಗದಲ್ಲಿ ಮದ್ಯದ ಬಾಟಲಿ, ಕಾಂಡೋಮ್ ಪತ್ತೆ
ವಾಯ್ಸ್ ಮೆಸೇಜ್ ಮಾಡಿ ತಡರಾತ್ರಿ ಕಾರಿನ ಸಮೇತ ಭದ್ರಾ ನಾಲೆಗೆ ಬಿದ್ದ ಒಂದೇ ಕುಟುಂಬದ ನಾಲ್ವರು!