ಮೈಸೂರು: ತಮ್ಮ ಹೆಸರಲ್ಲಿ ಮಹಿಳೆಯಿಂದ ಹಣ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ದರ್ಶನ್ ಅವರು, ಇಡೀ ಪ್ರಕರಣದ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ. ಅದನ್ನು ಆರೋಪಿಯೇ ಹೇಳಬೇಕೆಂದರು.
ಇದೀಗ ಇಡೀ ಪ್ರಕರಣ ದರ್ಶನ್ ಅವರ ಸ್ನೇಹಿತರು ಮತ್ತು ನಿರ್ಮಾಪಕ ಉಮಾಪತಿ ನಡುವೆಯೇ ಗಿರಕಿ ಹೊಡೆಯುತ್ತಿದ್ದು, ಬಂಧಿತ ಆರೋಪಿ ಅರುಣಾ ಕುಮಾರಿ ಅವರ ಮೇಲೆ ಇಡೀ ಪ್ರಕರಣ ನಿಂತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದರ್ಶನ್ ಅವರು ಲಾಕ್ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 9ರಂದು ಫಾರ್ಮ್ ಹೌಸ್ಗೆ ಬಂದೆ. ಮೈಸೂರಿನಲ್ಲಿ ನಮ್ಮದೊಂದು ಯೂನಿಯನ್ ಇದೆ. ಹೀಗಾಗಿ ಫಾರ್ಮ್ ಹೌಸ್ ಮತ್ತು ಮೈಸೂರಿಗೆ ಹೋಗಿ ಬರುತ್ತಿದೆ. ಹೀಗಿರುವಾಗ ಜೂನ್ 6ರಂದು ನನಗೆ ನಿರ್ಮಾಪಕ ಉಮಾಪತಿ ಅವರಿಂದ ಒಂದು ಕಾಲ್ ಬಂತು ನೀವು ಯಾರಿಗಾದರೂ ಶ್ಯೂರಿಟಿ ಹಾಕಿದ್ದೀರಾ ಅಂತ ಕೇಳಿದರು. ಕೆಲಸ ಇಲ್ಲದೇ ಎರಡು ವರ್ಷಗಳಾಗಿದೆ ನಾನು ಯಾರಿಗೇ ಶ್ಯೂರಿಟಿ ಹಾಕಲಿ ಅಂದೆ. ಮಹಿಳೆಯು ಸಹ ಕಾನ್ಫರೆನ್ಸ್ ಕಾಲ್ನಲ್ಲಿ ಅದೇ ಪ್ರಶ್ನೆಯನ್ನು ಕೇಳಿದರು ಎಂದರು.
ಸ್ನೇಹಿತರಾದ ಹರ್ಷ ಮೆಲಾಂಟ್, ರಾಕೇಶ್ ಪಾಪಣ್ಣ ಹಾಗೂ ರಾಕೇಶ್ ಶರ್ಮ ಅವರ ಹೆಸರುಗಳನ್ನು ಕೂಡ ಸರಿಯಾಗಿ ಹೇಳಿದರು. ಸಾಲದಕ್ಕೆ ಅವರ ಪತ್ನಿಯರ ಹೆಸರನ್ನು ಹೇಳಿದರು. ದಾಖಲೆ ಇಲ್ಲದೆ ಏನು ಮಾತನಾಡಬಾರದು ಎಂದು ನಾನು ಸುಮ್ಮನಿದ್ದೆ. ಜೂನ್ 14ರಂದು ನಾನು ಬೆಂಗಳೂರಿಗೆ ತೆರಳಿದೆ. ಬೆಂಗಳೂರಿಗೆ ಬಂದಿದ್ದೀರಾ ಎಂದು ಕೇಳಲು ಉಮಾಪತಿ ಅವರು ಫೋನ್ ಮಾಡಿದ್ದರು. ಜೂನ್ 16ರಂದು ಮಹಿಳೆ ನಮ್ಮ ಮನೆಗೆ ಬಂದರು. ಅರುಣಾ ಅವರು ಎಲ್ಲರ ಹೆಸರನ್ನು ಸರಿಯಾಗಿಯೇ ಹೇಳಿದರು. ಅಲ್ಲದೆ, ನನ್ನ ಆಧಾರ್ ಕಾರ್ಡ್ ನಂಬರ್ ಸಹ ಹೇಳಿದರು. ಪೋರ್ಜರಿ ಸಹಿ ಕೂಡ ತೋರಿಸಿದರು. ನನಗೆ ಶಾಕ್ ಆಯಿತು. ಎಲ್ಲಿ ತಪ್ಪಾಗುತ್ತದೆ ಎಂದು ಗೊತ್ತಾಗಲಿಲ್ಲ ಎಂದು ದರ್ಶನ್ ಹೇಳಿದರು.
ಇದಾದ ಬಳಿಕ ಮೈಸೂರಿಗೆ ಬಂದ ಆರೋಪಿ ಅರುಣಾ ಕುಮಾರಿ ಅವರನ್ನು ಸ್ನೇಹಿತರೊಂದಿಗೆ ನಮ್ಮ ತೋಟದ ಮನೆಯಲ್ಲಿ ಭೇಟಿ ಮಾಡಿಸಿದೆ. ಅವರ್ಯಾರು ಲೋನ್ಗೆ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದರು. ಆದರೆ. ಅರುಣಾ ಕುಮಾರಿ ಮಾತ್ರ ಸಲ್ಲಿಸಿದ್ದಾರೆ ಎಂದು ತಮ್ಮ ಮಾತಿಗೆ ಬದ್ಧವಾಗಿದ್ದರು. ಬ್ಯಾಂಕ್ ಮ್ಯಾನೇಜರ್ ಅಂತಾ ಹೇಳ್ತೀರಾ ಐಡಿ ಕಾರ್ಡ್ ಕೊಡಿ ಎಂದಿದ್ದಕ್ಕೆ ಮನೆಯಲ್ಲಿದ್ದೇ ತರಲು ಮರೆತುಬಿಟ್ಟೆ ಅಂದರು.
ಕೊನೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಅಲ್ಲ ಎಂದು ಗೊತ್ತಾದ ಬಳಿಕ ನಿರ್ಮಾಪಕ ಉಮಾಪತಿ ಅವರೇ ನನ್ ಕಳುಹಿಸಿದರು ಎಂದು ಅರುಣಾ ಕುಮಾರಿ ಹೇಳಿದ್ದಾರೆ. ಆದರೆ, ಫೋನ್ ಮಾಡಿದ ದಿನದಿಂದಲೇ ನನಗೆ ಅವರ ಪರಿಚಯ ಆಗಿದೆ ಎಂದು ಉಮಾಪತಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ನಮಗೂ ಗೊಂದಲವಿದೆ. ಸಮಗ್ರ ಪೊಲೀಸ್ ತನಿಖೆಯಿಂದ ಮಾತ್ರ ಎಲ್ಲವು ತಿಳಿದುಬರಲಿದೆ. ಇದರ ಹಿಂದೆ ಯಾರದ್ದೋ ಕೈವಾಡ ಇರುವ ಶಂಕೆ ಇದೆ. ಯಾರೇ ಇರಲಿ ಗೊತ್ತಾದರೆ ಮಾತ್ರ ಸುಮ್ಮನೇ ಬಿಡುವ ವ್ಯಕ್ತಿ ನಾನಲ್ಲ ಎಂದು ದರ್ಶನ್ ಹೇಳಿದರು.
ಇದರ ನಡುವೆ ದರ್ಶನ್ ಅವರು ಅರುಣಾ ಕುಮಾರಿ ಮತ್ತು ಉಮಾಪತಿ ನಡುವೆ ನಡೆದಿರುವ ವಾಟ್ಸ್ಆ್ಯಪ್ ಚಾಟಿಂಗ್ ಸ್ಕ್ರೀನ್ಶಾಟ್ ಕಾಪಿಯನ್ನು ಸಹ ದರ್ಶನ್ ತೋರಿಸಿದ್ದು, ಇದೀಗ ಪ್ರಕರಣ ಉಮಾಪತಿಯನ್ನು ತಿರುಗಿಕೊಂಡಿದೆ. ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆ ಕಾದು ನೋಡಬೇಕಿದೆ.