ಶಿಲ್ಲಾಂಗ್: ಮೇಘಾಲಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹು ದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್ನಿಂದ ಮಹಾ ವಲಸೆ ನಡೆದಿದ್ದು, ತಡರಾತ್ರಿ ಮಾಜಿ ಮುಖ್ಯಮಂತ್ರಿ ಕುಕುಲ್ ಸಂಗ್ಮಾ ಸೇರಿದಂತೆ 11 ಮಂದಿ ಕಾಂಗ್ರೆಸ್ ನಾಯಕರು ತೃಣಮೂಲ ಕಾಂಗ್ರೆಸ್ ಪಾರ್ಟಿಯನ್ನು ಸೇರಿಕೊಂಡಿದ್ದಾರೆ.
ಒಟ್ಟು 17 ಶಾಸಕರಲ್ಲಿ 12 ಮಂದಿ ತೃಣಮೂಲ ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿದೆ. ಮಾಜಿ ಸಿಎಂ ಮುಕುಲ್ ಸಂಗ್ಮಾ ಮತ್ತು ಪಕ್ಷ ರಾಜ್ಯಾಧ್ಯಕ್ಷ ವಿನ್ಸೆಂಟ್ ಎಚ್ ಪಾಲಾ ಅವರು ಮುಂದಿಟ್ಟ ಬೇಡಿಕೆ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಘಾಲಯಕ್ಕೆ ಭೇಟಿ ನೀಡಿದ ತಿಂಗಳ ಬೆನ್ನಲ್ಲೇ ಈ ವಿದ್ಯಾಮಾನ ಜರುಗಿರುವುದು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಾಜಿ ಸಿಎಂ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಕುಲ್ ಎಂ ಸಂಗ್ಮಾ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ವಿನ್ಸೆಂಟ್ ಹೆಚ್ ಪಾಲಾ ಅವರು ಮೇಘಾಲಯ ಘಟಕದ ಹೊಸ ಮುಖ್ಯಸ್ಥರಾಗಿ ನೇಮಕಗೊಂಡಾಗಿನಿಂದ ಅವರು ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಪಾಲಾ ನೇಮಕ ಮಾಡುವ ಬಗ್ಗೆ ಪಕ್ಷದ ನಾಯಕರು ನಮ್ಮ ನಡುವೆ ಸಮಾಲೋಚನೆ ನಡೆಸಿಲ್ಲ ಎಂದು ಸಂಗ್ಮಾ ಹಿಂದೆಯೇ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸಂಗ್ಮಾ ಅವರು ತೃಣಮೂಲ ಕಾಂಗ್ರೆಸ್ಗೆ ಪಕ್ಷಾಂತರ ಮಾಡಬಹುದು ಎಂಬ ಊಹಾಪೋಹವಿತ್ತು. ಆದಾಗ್ಯೂ, ಉಭಯ ನಾಯಕರು ಕಳೆದ ಶನಿವಾರ ಮುಂಬರುವ ಉಪಚುನಾವಣೆಗೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದರು.
ಇದರ ನಡುವೆ ಟಿಎಂಸಿ ಪರವಾಗಿ ಪ್ರಶಾಂತ್ ಕಿಶೋರ್ ಅವರ ತಂಡದ ಸದಸ್ಯರು ಕಾಂಗ್ರೆಸ್ ನಾಯಕರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಸಂಗ್ಮಾ ಟಿಎಂಸಿ ಪ್ರಸ್ತಾಪದ ಬಗ್ಗೆ ಆರಂಭದಲ್ಲಿ ಮನಸಿರಲಿಲ್ಲ. ಆದರೆ, ಇದೀಗ ದಿಢೀರ್ ಬೆಳವಣಿಗೆಯಲ್ಲಿ ಟಿಎಂಸಿ ಕಡೆ ಹೆಜ್ಜೆ ಹಾಕಿದ್ದಾರೆ. ಇತ್ತ ತಮ್ಮ ಪಕ್ಷವನ್ನು ವಿಸ್ತರಣೆ ಮಾಡುವ ಹುಮ್ಮಸ್ಸಿನಲ್ಲಿದ್ದ ಟಿಎಂಸಿ ಇದೀಗ ಮೇಘಾಲಯದಲ್ಲಿ ಕಾಂಗ್ರೆಸ್ಗೆ ಬಹು ದೊಡ್ಡ ಶಾಕ್ ನೀಡಿದೆ. (ಏಜೆನ್ಸೀಸ್)
ಎಂಟು ಮಂಡಲ ಮಹಾಮೃತ್ಯುಂಜಯ ಹೋಮ! ಕರೊನಾ ನಿವಾರಣೆಗೆ ರಾಣೆಬೆನ್ನೂರಿನಲ್ಲಿ ದಾಖಲೆ ಪೂಜೆ
ಇಂದಿನಿಂದ ಭಾರತ-ಕಿವೀಸ್ ಟೆಸ್ಟ್ ಸರಣಿ; ದ್ರಾವಿಡ್ ತರಬೇತಿಯಲ್ಲಿ ಮೊದಲ ಟೆಸ್ಟ್