ಪಟನಾ: ಆಮ್ಲೆಟ್ ಮಾಡಿಕೊಡಲು ಒಪ್ಪದ ಪತ್ನಿಯನ್ನು ಪತಿರಾಯನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ.
ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಆಕೆಯ ಮೃತದೇಹವನ್ನು ಸೀಲಿಂಗ್ ಫ್ಯಾನ್ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ಕೊನೆಗೆ ಪತಿರಾಯ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಅಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ನಿವೃತ್ತ ಸಬ್ ಇನ್ಸ್ಪೆಕ್ಟರ್ ರಾಮ್ ವಿನಯ್ ಸಿಂಗ್ ಪುತ್ರ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ತಂದೆ ರಾಮ್ ವಿನಯ್ ನೀಡಿದ ಹೇಳಿಕೆ ಆಧಾರದ ಮೇಲೆ ಅಜಿತ್ ಸಿಂಗ್ ವಿರುದ್ಧ ಸೀತಾಮರ್ಹಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಘಟನೆ ಜಿಲ್ಲೆಯ ಬೆಲ್ಹಿ ಜೈರಾಮ್ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿರುವ ರಾಮ್ ವಿನಯ್ ಸಿಂಗ್, ನನ್ನ ಮಗ ಮದ್ಯ ವ್ಯಸನಿ. ಗುರುವಾರ ಸಂಜೆ ಪಾನಮತ್ತನಾಗಿ ಮನೆಗೆ ಬಂದಿದ್ದ. ಬರುವಾಗ ಜತೆಯಲ್ಲಿ ಮೊಟ್ಟೆಗಳನ್ನು ತಂದಿದ್ದ. ಆಮ್ಲೆಟ್ ಮಾಡಿಕೊಡುವಂತೆ ಪತ್ನಿ ನೀತು ಸಿಂಗ್ (30) ಕೇಳಿದ. ಆದರೆ, ಆಕೆ ತಿರಸ್ಕರಿಸಿದಳು. ಗುರುವಾರ ಮೊಟ್ಟೆ ಮಾಡುವಂತಿಲ್ಲ ಎಂದು ಹೇಳಿದಳು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಯಿತು. ಗಂಡನ ಮದ್ಯ ವ್ಯಸನದಿಂದ ನೀತು ಬೇಸತ್ತು ಹೋಗಿದ್ದಳು. ಈ ಹಿಂದೆಯು ಆತನ ಚಟದ ವಿರುದ್ಧ ಆಕೆ ಪ್ರತಿಭಟಿಸಿದ್ದಳು. ಗುರುವಾರವೂ ಅದನ್ನೇ ಮಾಡಿದಳು. ಇದರಿಂದ ಕೋಪಗೊಂಡ ಅಜಿತ್ ಮೊದಲು ಆಕೆಯನ್ನು ಬೆಡ್ರೂಮ್ನಲ್ಲಿ ಮೃಗೀಯವಾಗಿ ಹಲ್ಲೆ ಮಾಡಿದ. ಇದಾದ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಸೀಲಿಂಗ್ ಫ್ಯಾನ್ಗೆ ನೇತು ಹಾಕಿದ್ದಾನೆ. ಕೆಲವೇ ಸಮಯದಲ್ಲಿ ನೀತು ಕಿರುಚಾಡುವುದು ನಿಂತು ಹೊಗಿದ್ದರಿಂದ ಇಬ್ಬರು ಸಮಾಧಾನಗೊಂಡಿರಬಹುದೆಂದು ಭಾವಿಸಿದೆವು. ಆದರೆ, ಕೆಲವೇ ಕ್ಷಣದಲ್ಲಿ ಅಜಿತ್ ಮನೆಯಿಂದ ಆಚೆ ಬಂದು ಓಡಿ ಹೋದನು. ಇದಾದ ಬಳಿಕ ಕೋಣೆ ಒಳಗೆ ನೋಡಿದಾಗ ನೀತು ಮೃತದೇಹ ಫ್ಯಾನಿನಲ್ಲಿ ನೇತಾಡುತ್ತಿತ್ತು. ಅದನ್ನು ನೋಡಿ ನಮಗೆ ಆಘಾತವಾಯಿತು ಎಂದು ರಾಮ್ ವಿನಯ್ ಸಿಂಗ್ ಹೇಳಿದ್ದಾರೆ.
ಎಫ್ಐಆರ್ ನಲ್ಲಿ ವಿನಯ್ ಸಿಂಗ್ ಹೇಳಿಕೆಯನ್ನು ದಾಖಲಿಸಲಾಗಿದೆ. ಠಾಣಾಧಿಕಾರಿ ಎಚ್.ಎಸ್. ಕುಮಾರ್ ಎಂಬುವರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ. (ಏಜೆನ್ಸೀಸ್)
ಹಿಜಾಬ್ ವಿವಾದ ಕುರಿತು ದಂಗಲ್ ಹುಡುಗಿ ಜೈರಾ ವಾಸಿಮ್ ಹೇಳಿದ್ದು ಹೀಗೆ…
ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಮಾಜಿ ಸಿಎಂ ಬಿಎಸ್ವೈ! ನೈಜ ಘಟನೆ ಆಧಾರಿತ ಸಿನಿಮಾದಲ್ಲಿ ನಟನೆ
ವೆಸ್ಟ್ ಇಂಡೀಸ್ ಎದುರು ಕ್ಲೀನ್ಸ್ವೀಪ್ ಗುರಿಯತ್ತ ಭಾರತ ; ಇಂದು 3ನೇ ಟಿ20 ಪಂದ್ಯ; ಗೆದ್ದರೆ ನಂ.1 ಪಟ್ಟ