ಮುಂಬೈ: ಭಾರತೀಯ ಸಿನಿಮಾ ರಂಗದ ಬಹುನಿರೀಕ್ಷಿತ ಹಾಗೂ ಹೆಮ್ಮೆಯ ಸಿನಿಮಾ “83” ಇನ್ನೆರೆಡು ದಿನಗಳಲ್ಲಿ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. 1983ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ವಿಶ್ವಕಪ್ ಗೆದ್ದ ಕ್ಷಣವನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆಗಿನ ವಿಶ್ವಕಪ್ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಅವರ ಪಾತ್ರಕ್ಕೆ ರಣವೀರ್ ಸಿಂಗ್ ಬಣ್ಣ ಹಚ್ಚಿದ್ದಾರೆ.
83 ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲಿ ನಟ ಸುದೀಪ್ ಚಿತ್ರವನ್ನು ರಾಜ್ಯದ ಜನತೆಗೆ ಅರ್ಪಿಸುತ್ತಿದ್ದಾರೆ. ಚಿತ್ರವನ್ನು ಭಜರಂಗಿ ಭಾಯಿಜಾನ್ ಖ್ಯಾತಿಯ ಕಬೀರ್ ಖಾನ್ ನಿರ್ದೇಶನ ಮಾಡಿದ್ದು, ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣುವರ್ಧನ್ ಇಂದೂರಿ, ಸಾಜಿದ್ ನಾಡಿಯಾಡ್ವಾಲಾ, ಮಧು ಮಂಟೆನಾ ವರ್ಮಾ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. 1983ರ ವಿಶ್ವಕಪ್ ತಂಡದಲ್ಲಿದ್ದ ಆಟಗಾರರಿಗೆ 83 ಸಿನಿಮಾ ತಂಡವೂ ಗೌರವ ಧನ ನೀಡಿ ಗೌರವಿಸಿದೆ ಎಂಬ ಸುದ್ದಿ ಇದೀಗ ಕೇಳಿಬಂದಿದೆ.
ಸಿನಿಮಾ ಮೂಲಗಳ ಪ್ರಕಾರ 1983ರ ವಿಶ್ವಕಪ್ ತಂಡದ ಆಟಗಾರರಿಗೆ 15 ಕೋಟಿ ರೂ. ನೀಡಿದೆ ಎಂಬ ಮಾಹಿತಿ ಇದೆ. ಅದರಲ್ಲಿ ಕಪಿಲ್ ದೇವ್ ಅವರಿಗೆ ಹೆಚ್ಚಿನ ಪಾಲು ದೊರಕಿದೆ. ಕಪಿಲ್ ಅವರಿಗೆ 5 ಕೋಟಿ ರೂ. ನೀಡಲಾಗಿದ್ದು, ಇನ್ನುಳಿದವರಿಗೆ ಉಳಿದ ಹಣವನ್ನು ಸಮವಾಗಿ ಹಂಚಲಾಗಿದೆ. ಸಿನಿಮಾ ನಿರ್ಮಾಣಕ್ಕೂ ಮುನ್ನ ಪ್ರತಿಯೊಬ್ಬ ಆಟಗಾರರನ ವೈಯಕ್ತಿಕ ಕತೆಗಳನ್ನು ಕೇಳಿ ಅವರ ಒಪ್ಪಿಗೆಯನ್ನು ಚಿತ್ರತಂಡ ಪಡೆದುಕೊಂಡಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಚಿತ್ರತಂಡ ಪ್ರತಿಯೊಬ್ಬ ಆಟಗಾರನಿಗೆ ಗೌರವಧನವನ್ನು ನೀಡಿದೆ.
ಇನ್ನು ಸಿನಿಮಾದ ಟ್ರೈಲರ್ ಬಿಡುಗಡೆಯಾದಾಗಿನಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಅನ್ನು ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೂ ಪ್ರದರ್ಶಿಸಲಾಗಿತ್ತು. ಈ ವೇಳೆ ಕಪಿಲ್ ದೇವ್ ಸೇರಿದಂತೆ ಎಲ್ಲರೂ ಆ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಟ್ರೈಲರ್ ನೋಡಿ ದೀಪಿಕಾ ಪಡುಕೋಣೆ ತುಂಬಾ ಭಾವುಕರಾಗಿದ್ದರು.
ಇನ್ನು ಸಿನಿಮಾದಲ್ಲಿ ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಸುನೀಲ್ ಗವಾಸ್ಕರ್ ಪಾತ್ರಕ್ಕೆ ತಾಹಿತ್ ರಾಜ್ ಭಾಸಿನ್, ಯಶ್ಪಾಲ್ ಶರ್ಮಾ ಪಾತ್ರಕ್ಕೆ ಜತಿನ್ ಸರ್ಣ, ಮಹೀಂದರ್ ಅಮರ್ನಾಥ್ ಪಾತ್ರಕ್ಕೆ ಸಖಿಬ್ ಸಲೀಮ್, ರವಿಶಾಸ್ತ್ರಿ ಪಾತ್ರಕ್ಕೆ ಧೈರ್ಯ ಕರ್ವಾ, ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರಕ್ಕೆ ಜೀವಾ, ಮದನ್ ಲಾಲ್ ಪಾತ್ರಕ್ಕೆ ಹಾರ್ಡಿ ಸಂಧು, ಬಲ್ವಿಂಧರ್ ಸಂಧು ಪಾತ್ರಕ್ಕೆ ಅಮ್ಮಿ ವಿರ್ಕ್, ಸೈಯದ್ ಕಿರ್ಮಾನಿ ಪಾತ್ರಕ್ಕೆ ಸಾಹಿಲ್ ಖಟ್ಟರ್, ಸಂದೀಪ್ ಪಾಟೀಲ್ ಪಾತ್ರಕ್ಕೆ ಚಿರಾಗ್ ಪಾಟೀಲ್ ಹಾಗೂ ಟೀಮ್ ಮ್ಯಾನೇಜರ್ ಪಿ ಆರ್ ಮ್ಯಾನ್ ಸಿಂಗ್ ಪಾತ್ರಕ್ಕೆ ಪಂಕಜ್ ತ್ರಿಪಾಠಿ ಬಣ್ಣ ಹಚ್ಚಿದ್ದಾರೆ.
83 ಸಿನಿಮಾವೂ 2021ರ ಡಿಸೆಂಬರ್ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. (ಏಜೆನ್ಸೀಸ್)
View this post on Instagram
ಕಾವಿಧಾರಿಗಳಿಬ್ಬರ ಬೇಡಿಕೆ ಕೇಳಿ ಗೃಹ ಸಚಿವರೇ ತಬ್ಬಿಬ್ಬು! ಒಪ್ಪಲೂ ಆಗದೆ, ನಿರಾಕರಿಸಲೂ ಆಗದೆ ಪರದಾಡಿದ್ರು…
ನಾಲ್ಕೇ ದಿನದಲ್ಲಿ 2003 ಕೋಟಿ ರೂ.! ಇಲ್ಲಿದೆ ಅಸಲಿಯತ್ತು, ಸಿಕ್ಕಾಪಟ್ಟೆ ಟ್ರೋಲ್ ಆದ ಅಲ್ಲು ಅರ್ಜುನ್
ಡಿವೋರ್ಸ್ ಪರಿಹಾರ ನೀಡಲು ದುಬೈ ಪ್ರಧಾನಿಗೆ ಕೋರ್ಟ್ ಆದೇಶ: ಪರಿಹಾರ ಮೊತ್ತ ಕೇಳಿದ್ರೆ ಬೆರಗಾಗೋದು ಖಂಡಿತ!
ಬೀದಿ ನಾಯಿಗಳಿಗೆ ಊಟ ಹಾಕಲು ಬಂದ ಮಹಿಳೆಗೆ ಮರ್ಮಾಂಗ ತೋರಿದ ಕಾನ್ಸ್ಟೇಬಲ್: ಸ್ಥಳದಲ್ಲೇ ಹೈಡ್ರಾಮ