ಕೊಲೊರಾಡೊ ಸ್ಪ್ರಿಂಗ್ಸ್: ಬರ್ತಡೇ ಪಾರ್ಟಿಗೆ ಆಹ್ವಾನಿಸಲಿಲ್ಲ ಎಂಬ ಬೇಸರದಿಂದ ತಾಳ್ಮೆ ಕಳೆದುಕೊಂಡ ಯುವಕನೊಬ್ಬ ತನ್ನ ಗರ್ಲ್ಫ್ರೆಂಡ್ ಸೇರಿದಂತೆ ಆಕೆಯ ಕುಟುಂಬದ ಇತರೆ 5 ಸದಸ್ಯರ ಮೇಲೆ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೊಲೊರಾಡೋ ಸ್ಪ್ರಿಂಗ್ಸ್ನಲ್ಲಿ ನಡೆದಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ ಆರೋಪಿ ಟಿಯೊಡೊರೊ ಮಾಕಿಯಾಸ್ (28) ಕೊಲೊರಾಡೋ ಸ್ಪ್ರಿಂಗ್ಸ್ನ 2800ನೇ ಬ್ಲಾಕ್ನಲ್ಲಿರುವ ಗರ್ಲ್ಫ್ರೆಂಡ್ ಮನೆಗೆ ಭಾನುವಾರ ಮಧ್ಯರಾತ್ರಿ ತೆರಳಿದ್ದಾನೆ. ಮೊದಲು ತನ್ನ ಗರ್ಲ್ಫ್ರೆಂಡ್ ಸಾಂದ್ರಾ ಇಬಾರಾ ಪರೆಜ್ (28) ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. ಇದರ ಬೆನ್ನಲ್ಲೇ ಕುಟುಂಬದ ಇತರೆ ಐವರ ಮೇಲೆಯೂ ಫೈರಿಂಗ್ ಮಾಡಿದ್ದಾನೆ. ಇದಾದ ಬಳಿಕ ಆರೋಪಿಯು ಸಹ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತರನ್ನು ಮೆಲ್ವಿನ್ ಪೆರೆಜ್ (30), ಪತ್ನಿ ಮಯ್ರಾ ಇಬಾರಾ ಡೆ ಪೆರೆಜ್ (33), ಮೆಲ್ವಿನ್ ಸಹೋದರ ಜೋಸ್ ಗುಟಿಯರೆಜ್ (21), ಮೆಲ್ವಿನ್ ತಾಯಿ ಜೋನಾ ಕ್ರಜ್ (52) ಮತ್ತು ಮಯ್ರಾ ಇಬಾರಾ ಸಹೋದರಿ ಜೋಸ್ ಇಬಾರಾ (26) ಎಂದು ಗುರುತಿಸಲಾಗಿದೆ.
ಆರೋಪಿ ಟಿಯೊಡೊರೊ ಮತ್ತು ಇಬಾರಾ ಪೆರೆಜ್ ಸುಮಾರು ಒಂದು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈ ನಡುವೆ ಟಿಯೊಡೊರೊ ಇಬಾರಾಳನ್ನು ಆಕೆಯ ಕುಟುಂಬ ಪ್ರತ್ಯೇಕಿಸಲು ಸಾಕಷ್ಟು ಪ್ರಯತ್ನ ಮಾಡಿದ್ದ. ಇದು ಗೊತ್ತಾಗಿ ಘಟನೆ ನಡೆಯುವ ಒಂದು ವಾರಕ್ಕೂ ಮುಂಚೆ ಆರೋಪಿ ಮತ್ತು ಗರ್ಲ್ಫ್ರೆಂಡ್ ಕುಟುಂಬದ ನಡುವೆ ಜಗಳವು ನಡೆದಿತ್ತು.
ಇದಾದ ಬಳಿಕ ಇಬಾರಾ ಪೆರೆಜ್ ಮನೆಯಲ್ಲಿ ಬರ್ತಡೇ ಸಂಭ್ರಮ ನಡೆದಿತ್ತು. ಆದರೆ, ಟಿಯೊಡೊರೊನನ್ನು ಇಬಾರಾ ಪೆರೆಜ್ ಆಹ್ವಾನಿಸರಲಿಲ್ಲ. ಇದರಿಂದ ಬೇಸತ್ತಿದ್ದ ಆತ ಹತಾಶೆಯಿಂದ ತಾಳ್ಮೆ ಕಳೆದುಕೊಂಡು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ಬಳಿಕ ಗರ್ಲ್ಫ್ರೆಂಡ್ ಮನೆಯತ್ತ ಗನ್ ಹಿಡಿದು ಹೊರಟ ಆರೋಪಿ, ಬರ್ತಡೇ ಸಂಭ್ರಮದಲ್ಲಿ ತೇಲುತ್ತಿದ್ದ ಜನಗಳ ನಡುವೆ ಗರ್ಲ್ಫ್ರೆಂಡ್ ಸೇರಿದಂತೆ ಆಕೆಯ ಮನೆಯವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
ಇದಾದ ಬೆನ್ನಲ್ಲೇ ಪೊಲೀಸರು ಕರೆ ಸ್ವೀಕರಿಸಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದವರನ್ನು ನೋಡಿ ಗಾಬರಿಯಾದರು. ಅದರಲ್ಲಿ ಓರ್ವ ಇನ್ನು ಬದುಕುಳಿದಿದ್ದ. ಆದರೆ, ಪೊಲೀಸರು ಬಂದು ಕೆಲವೇ ಕ್ಷಣಗಳಲ್ಲಿ ಆತನ ಸಾವಿಗೀಡಾದ. ಮನೆಯ ಎಲ್ಲರನ್ನು ಕೊಲೆ ಮಾಡಲಾಗಿದ್ದು, ಇದರಿಂದ ಮೂವರು ಮಕ್ಕಳು ಅನಾಥರಾಗಿದ್ದಾರೆ ಎಂದು ಕೊಲೊರೊಡೊ ಸ್ಪ್ರಿಂಗ್ಸ್ ಪೊಲೀಸರು ತಿಳಿಸಿದ್ದಾರೆ.
ಇನ್ನು ಆರೋಪಿ ಅಪರಾಧ ಕೃತ್ಯದ ಹಿನ್ನೆಲೆ ಹೊಂದಿಲ್ಲ. ಆತ ಸ್ವಭಾತಃ ಒಳ್ಳೆಯ ವ್ಯಕ್ತಿಯೇ ಎನ್ನಲಾಗಿದೆ. ಆದರೆ, ಇದೀಗ ಗರ್ಲ್ಫ್ರೆಂಡ್ ಕುಟುಂಬದ ಮೇಲೆ ಕ್ರೌರ್ಯ ಮೆರೆದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗೆ ಗನ್ ಹೇಗೆ ದೊರೆಯಿತು? ಎಂಬುದನ್ನು ಸೇರಿದಂತೆ ಸಮಗ್ರ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಬೇರೆ ಬೇರೆ ಕಂಪನಿಯ 2 ಡೋಸ್ ಕರೊನಾ ಲಸಿಕೆ ಪಡೆದರೆ ಏನಾಗುತ್ತೆ? ಅಧ್ಯಯನದಲ್ಲಿ ಕಂಡುಬಂದಿದ್ದೇನು?
ಜೀಕನ್ನಡದಲ್ಲಿ ವೀಕೆಂಡ್ ಮನರಂಜನೆ: “ಕಥಾಸಂಗಮ” ಹಾಗೂ “ರಾಮಾರ್ಜುನ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್