ಚಾಮರಾಜನಗರ: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ವಸತಿ ಸಚಿವ ವಿ.ಸೋಮಣ್ಣ ಅವರು ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ವಿಡಿಯೋದಲ್ಲಿರುವ ಮಹಿಳೆ ಸ್ಪಷ್ಟನೆ ನೀಡಿದ್ದು, ನನಗೆ ಸಚಿವರು ಹೊಡೆಯಲಿಲ್ಲ ಎಂದಿದ್ದಾರೆ.
ವಿಡಿಯೋ ಮೂಲಕ ಮಹಿಳೆ ಕೆಂಪಮ್ಮ ಸ್ಪಷ್ಟನೆ ನೀಡಿದ್ದಾರೆ. ನನಗೂ ನಿವೇಶನ ಕೊಡಿ ಎಂದು ಸಚಿವರ ಕಾಲಿಗೆಬಿದ್ದೆ. ಸಚಿವರು ನನ್ನನ್ನು ಮೇಲಕ್ಕೆ ಎತ್ತಿ ಕ್ಷಮೆ ಕೇಳಿ, ಸಮಾಧಾನ ಪಡಿಸಿದರು. ಸಚಿವರು ನನಗೆ ಹೊಡೆಯಲಿಲ್ಲ. ಆದರೆ, ನನಗೆ ಹೊಡೆದರು ಎಂದು ಅಪವಾದ ಹೊರಿಸಿದ್ದಾರೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಕೆಂಪಮ್ಮ, ನಿವೇಶನಕ್ಕೆಂದು ಕೊಟ್ಟಿದ್ದ ನಾಲ್ಕು ಸಾವಿರ ರೂಪಾಯಿ ಹಣವನ್ನು ಸಹ ವಾಪಸ್ ಕೊಡಿಸಿದ್ದಾರೆ. ಪುಣ್ಯಾತ್ಮರು ನನಗೆ ನಿವೇಶನ ಕೊಡಿಸಿ, ನನ್ನ ಮಕ್ಕಳಿಗೆ ದಾರಿ ತೋರಿಸಿ, ಒಳ್ಳೆಯದು ಮಾಡಿದ್ದಾರೆ. ನಾನು ಮನೆಯಲ್ಲಿ ಅವರ ಫೋಟೋವನ್ನು ಇಟ್ಟುಕೊಂಡು ಪೂಜೆ ಮಾಡುತ್ತೇನೆ ಎಂದಿದ್ದಾರೆ.
ಘಟನೆ ಹಿನ್ನೆಲೆ ಏನು?
ನಿನ್ನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸಂಜೆ 6:30 ಕ್ಕೆ ಸಚಿವ ವಿ. ಸೋಮಣ್ಣ ಆಗಮಿಸಿದರು. ಇದರಿಂದಾಗಿ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಯಿತು. ಈ ವೇಳೆ ತನ್ನ ಸಮಸ್ಯೆ ಹೇಳಿಕೊಳ್ಳಲು ಮಹಿಳೆ, ಸಚಿವರ ಬಳಿ ತೆರಳಿದಾಗ, ಸೋಮಣ್ಣ ಅವರು ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಮಹಿಳೆಯೇ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. (ದಿಗ್ವಿಜಯ ನ್ಯೂಸ್)
ಕರ್ನಾಟಕದಲ್ಲಿ ಪೂರ್ಣಗೊಂಡ ಭಾರತ್ ಜೋಡೋ ಯಾತ್ರೆ: ರಾಜ್ಯದ ಜನತೆಗೆ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಆರೋಗ್ಯ ಕೇಂದ್ರಕ್ಕೆ ನುಗ್ಗಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ: ಓರ್ವ ಅಪ್ರಾಪ್ತ ಸೇರಿ ಮೂವರ ಬಂಧನ
ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ನಿಧನ; ಜನಸಂಕಲ್ಪ ಯಾತ್ರೆ ಮುಂದೂಡಿಕೆ