ಕೋಲ್ಕತ: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ಕಚ್ಚಾ ಬಾದಾಮ್ ಖ್ಯಾತಿಯ ಗಾಯಕ ಭುವನ್ ಬದ್ಯಕರ್ ಕಳೆದ ಸೋಮವಾರ (ಫೆ.28) ರಾತ್ರಿ ಕಾರು ಅಪಘಾತಕ್ಕೀಡಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಭುವನ್ ಹೊಸ ಹಾಡನ್ನು ಹಾಡಿದ್ದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಚ್ಚಾ ಬಾದಾಮ್ ಹಾಡಿನ ಮೂಲಕ ಗಳಿಸಿದ ಹಣದಲ್ಲಿ ಭುವನ್ ಇತ್ತೀಚೆಗಷ್ಟೇ ಸೆಕೆಂಡ್ ಹ್ಯಾಂಡ್ ಕಾರು ಖರಿದೀಸಿದ್ದಾರೆ. ಸೋಮವಾರ ಕಾರು ಓಡಿಸುವುದನ್ನು ಕಲಿಯುವಾಗ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದು ಎದೆಗೆ ಪೆಟ್ಟಾಗಿತ್ತು. ಬಳಿಕ ಭುವನ್ ಅವರು ಸುರಿಯಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಇದೀಗ ಚೇತರಿಸಿಕೊಂಡಿರುವ ಭುವನ್, ಅಮರ್ ನೋತುನ್ ಗರಿ (ಬಂಗಾಳಿಯಲ್ಲಿ ನನ್ನ ಹೊಸ ಕಾರು) ಸಾಲಿನಿಂದ ಆರಂಭವಾಗುವ ಹಾಡನ್ನು ಹಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೊಸ ಹಾಡಿನಲ್ಲಿ ಭುವನ್ ತಾವು ಹೇಗೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದರು ಮತ್ತು ಡ್ರೈವಿಂಗ್ ಕಲಿಯುವಾಗ ದುರದೃಷ್ಟವಶಾತ್ ಗೋಡೆಗೆ ಹೇಗೆ ಡಿಕ್ಕಿ ಹೊಡೆದರು ಹಾಗೂ ಅಪಘಾತದ ಸಮಯದಲ್ಲಿ ದೇವರು ಅವರನ್ನು ಹೇಗೆ ಗಂಭೀರತೆಯಿಂದ ರಕ್ಷಿಸಿದನು ಎಂಬುದನ್ನು ಹಾಡಿನ ಮೂಲಕ ವಿವರಿಸಿದ್ದಾರೆ.
Kacha Badam Kaku new song after his accident ‼️💥#BhubanBadyakar#KachaBadam#BadamKaku pic.twitter.com/BOaAJhLRAq
— I Love Siliguri (@ILoveSiliguri) March 5, 2022
ಮಾಧ್ಯಮದೊಂದಿಗೆ ಮಾತನಾಡಿರುವ ಭುವನ್, ನಾನು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದೆ. ಮತ್ತು ನಾನು ಅದನ್ನು ಓಡಿಸಲು ಪ್ರಯತ್ನಿಸಿದೆ. ಗೋಡೆಗೆ ಅಪಘಾತ ಸಂಭವಿಸಿ ಗಾಯಗೊಂಡಿದೆ. ಈಗ ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಹಾಗಾಗಿ ನನ್ನ ಹೊಸ ಕಾರಿನಲ್ಲಿ ಹೊಸ ಹಾಡನ್ನು ರಚಿಸಲು ಯೋಚಿಸಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿದ ಹಾಡೆಂದರೆ ಅದು ಕಚ್ಚಾ ಬಾದಾಮ್. ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ಎಲ್ಲಿ ನೋಡಿದರೂ ಬರೀ ಕಚ್ಚಾ ಬಾದಾಮ್ ರೀಮಿಕ್ಸ್ ಹಾಡೇ ಕಣ್ಣು ಮುಂದೆ ಮೊದಲು ಬರುತ್ತಿದೆ. ಇದೇ ಹಾಡನ್ನು ಕೇಳಿ ಕೇಳಿ ಸುಸ್ತಾದ ಎಷ್ಟೋ ಮಂದಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದಾರೆ. ಎಷ್ಟರಮಟ್ಟಿಗೆ ಈ ಹಾಡು ಹಿಟ್ ಆಗಿದೆ ಅಂದರೆ, ಯೂಟ್ಯೂಬ್ನಲ್ಲಿ ಬರೋಬ್ಬರಿ 50 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಹಾಡಿನಿಂದ ಭುವನ್ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯ ನಿವಾಸಿ ಆಗಿರುವ ಭುವನ್ ಕಚ್ಚಾ ಬಾದಾಮ್ ಹಾಡು ಹೇಳಿಕೊಂಡು ಊರೂರು ತಿರುಗುತ್ತಾ ಕಡಲೆಕಾಯಿ ಮಾರಾಟ ಮಾಡಿ ಒಂದೆರೆಡು ಕಾಸು ಸಂಪಾದನೆ ಮಾಡುತ್ತಿದ್ದರು. ಅವರ ಹಾಡನ್ನು ಗುರುತಿಸಿದ ಗೋಧುಲಿಬೆಲಾ ಮ್ಯೂಸಿಕ್ ಕಂಪನಿ ರೀಮಿಕ್ಸ್ ಮಾಡಿ, ಭುವನ್ ಕೈಯಲ್ಲೇ ಹಾಡಿಸಿದ್ದಾರೆ. ಇದಾದ ಬಳಿಕ ಭುವನ್ ಬದುಕೇ ಬದಲಾಗಿದೆ.
ಕಚ್ಚಾ ಬಾದಾಮ್ ಒರಿಜಿನಲ್ ಸಾಂಗ್ ಅನ್ನು ರೀಮಿಕ್ಸ್ ಮಾಡಲು ಸಂಭಾವನೆಯಾಗಿ ಭುವನ್ಗೆ 3 ಲಕ್ಷ ರೂ. ನೀಡಲಾಗಿದೆ ಎಂದು ತಿಳಿದುಬಂದಿದೆ. ಕಡಲೆಕಾಯಿ ಮಾರಾಟ ಮಾಡಿ ದಿನದೂಡುತ್ತಿದ್ದ ಭುವನ್ ಇದೀಗ ಕಚ್ಚಾ ಬಾದಾಮ್ ಮೂಲಕ ಖ್ಯಾತಿಯಾಗಿದ್ದು, ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಲಕ್ ಬದಲಾಗಿದೆ. (ಏಜೆನ್ಸೀಸ್)
ದುಬೈನಲ್ಲಿ ಕೇರಳದ ಸೋಶಿಯಲ್ ಮೀಡಿಯಾ ಸ್ಟಾರ್ ಸಾವು: ಗಂಡನ ಮೇಲಿನ ಸಂಶಯಕ್ಕೆ ಕಾರಣ ಹೀಗಿದೆ…
ಬಸವಣ್ಣನಿಗೆ ಹಾಲು ಕುಡಿಸಲು ಹರಿದುಬಂದ ಭಕ್ತರ ದಂಡು: ದೇವಸ್ಥಾನದ ಬಾಗಿಲನ್ನೇ ಮುಚ್ಚಿಸಿದ ಪೊಲೀಸರು!