ರಾಜ್ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯರು ಪ್ರವಾಸಿ ತಂಡದ ವಿರುದ್ಧ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದ್ದು, ಆರ್. ಅಶ್ವಿನ್ ಮಾಡಿದ ಎಡವಟ್ಟಿನಿಂದ ಟೀಂ ಇಂಡಿಯಾಗೆ ಪೆನಾಲ್ಟಿ ವಿಧಿಸಲಾಗಿದ್ದು, ಇಂಗ್ಲೆಂಡ್ಗೆ ಇದರ ಲಾಭವೆತ್ತಿದೆ.
ಟೀಂ ಇಂಡಿಯಾದ ಇನ್ನಿಂಗ್ಸ್ನ 102ನೇ ಓವರ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಆರ್. ಅಶ್ವಿನ್ ಈ ಎಡವಟ್ಟು ಮಾಡಿದ್ದು, ರೆಹಾನ್ ಅಹ್ಮದ್ ಎಸೆದ ಈ ಓವರ್ನಲ್ಲಿ ಅಶ್ವಿನ್ ಒಂದು ರನ್ ಗಳಿಸಿದರು. ಈ ಸಂದರ್ಭ ಅಶ್ವಿನ್ ಪಿಚ್ನ ಮಧ್ಯದಲ್ಲಿ ಓಡಿರುವುದು ಕಂಡು ಬಂದಿದ್ದು, ಇದರಿಂದಾಗಿ ಭಾರತ ತಂಡ ಇಂಗ್ಲೆಂಡ್ಗೆ 5 ರನ್ಗಳನ್ನು ಬಿಟ್ಟುಕೊಡಬೇಕಾಯಿತು.
ನಿಯಮಗಳ ಪ್ರಕಾರ, ಪಿಚ್ನ ಮಧ್ಯದಲ್ಲಿ ಓಡುವಂತಿಲ್ಲ. ಇದರಿಂದಾಗಿ ಪಿಚ್ ಹಾಳಾಗುತ್ತದೆ. ಮೊದಲ ದಿನ ರವೀಂದ್ರ ಜಡೇಜಾ ಕೂಡ ಇದೇ ರೀತಿಯ ತಪ್ಪು ಮಾಡಿದ್ದರು. ಆಗ ಅಂಪೈರ್ ಜಡೇಜಾಗೆ ಎಚ್ಚರಿಕೆ ನೀಡಿದ್ದರು. ಆ ಬಳಿಕ ಅಶ್ವಿನ್ ಮಾಡಿದ ಅದೇ ತಪ್ಪಿನಿಂದಾಗಿ ಅಂಪೈರ್ 5 ರನ್ಗಳ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ಪೇಂಟ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; 11 ಮಂದಿ ಸಜೀವ ದಹನ, ಹಲವರು ನಾಪತ್ತೆ
ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ನ ಕಾನೂನು 41 ರ ಅಡಿಯಲ್ಲಿ 2017 ರಿಂದ ಆಟಗಾರರ ನಡವಳಿಕೆಗಾಗಿ ಕಾನೂನು 42 ರ ಪ್ರಕಾರ ದಂಡವನ್ನು ನೀಡಲಾಗುತ್ತದೆ. ಬ್ಯಾಟಿಂಗ್ ತಂಡವು ಈರೀತಿಯ ತಪ್ಪು ಮಾಡಿ ಎಚ್ಚರಿಕೆ ನೀಡಿದ ನಂತರವೂ ಮುಂದುವರೆಸಿದರೆ ಫೀಲ್ಡಿಂಗ್ ತಂಡಕ್ಕೆ ಐದು ಪೆನಾಲ್ಟಿ ರನ್ಗಳನ್ನು ನೀಡಲಾಗುತ್ತದೆ. ಪಿಚ್ನಲ್ಲಿ ಓಡುವುದನ್ನು ಅಥವಾ ಪಿಚ್ಗೆ ಹಾನಿ ಮಾಡುವ ಮಾರ್ಗವೆಂದು ಇದನ್ನು ಪರಿಗಣಿಸಲಾಗುತ್ತದೆ. ಪಿಚ್ನಲ್ಲಿ ಓಡುವುದನ್ನು ಲೆವೆಲ್ 1 ಅಪರಾಧ ಎಂದು ಪರಿಗಣಿಸಲಾಗಿದೆ.
ಇತ್ತ ಅಂಪೈರ್ ಟೀಂ ಇಂಡಿಯಾಗೆ ಐದು ರನ್ಗಳ ಪೆನಾಲ್ಟಿ ವಿಧಿಸುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಆರ್. ಅಶ್ವಿನ್ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ. ಅಶ್ವಿನ್ ಮಾಡಿದ ಎಡವಟ್ಟಿನಿಂದಾಗಿ ರೋಹಿತ್ ಶರ್ಮಾ ಒಂದು ಕ್ಷಣ ತಾಳ್ಮೆ ಕಳೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.