ವಿಜಯವಾಡ: ಸಿನಿಮಾ ಟಿಕೆಟ್ ದರದ ವಿಚಾರವಾಗಿ ಆಂಧ್ರ ಪ್ರದೇಶ ಸರ್ಕಾರ ಮತ್ತು ತೆಲುಗು ಸಿನಿಮಾ ಇಂಡಸ್ಟ್ರಿ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ತೆಲುಗು ಸಿನಿಮಾ ಇಂಡಸ್ಟ್ರಿಯ ಮೇಲೆ ಆಂಧ್ರ ಸರ್ಕಾರ ದಮನ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಸ್ವತಃ ಆಂಧ್ರದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಟಿಕೆಟ್ ದರ ಏರಿಕೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಸಿನಿಮಾ ಟಿಕೆಟ್ ದರ ಇಳಿಕೆ ವಿರುದ್ಧ ಮಾತನಾಡುತ್ತಿರುವವರಿಗೆ ತಿರುಗೇಟು ನೀಡಿರುವ ಸಿಎಂ ಜಗನ್, ಬಡವರಿಗೆ ಸಹಾಯ ಮಾಡಲು ಟಿಕೆಟ್ ದರ ಇಳಿಕೆ ಮಾಡಲಾಗಿದೆ. ಆದರೆ, ಸಿನಿಮಾದ ಕೆಲವು ಮಂದಿ ಇದರ ವಿರುದ್ಧವಾಗಿದ್ದಾರೆ. ಯಾರು ದರ ಇಳಿಕೆ ವಿರುದ್ಧ ಮಾತನಾಡುತ್ತಾರೋ ಅವರೆ ಬಡವರ ನಿಜವಾದ ಶತ್ರುಗಳು ಎಂದಿದ್ದಾರೆ.
ಇತ್ತೀಚೆಗಷ್ಟೇ ಆಂಧ್ರ ಸಿಎಂ ಜಗನ್ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಎಪಿ ಸಿನಿಮಾಟೋಗ್ರಫಿ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದರು. ಸರ್ಕಾರದ ಹೊಸ ಆದೇಶದಲ್ಲಿ ಮುನ್ಸಿಪಾಲಿಟಿ, ಮುನ್ಸಿಪಲ್ ಕಾರ್ಪೊರೇಷನ್, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ಸಿನಿಮಾ ಟಿಕೆಟ್ ದರದ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯ ಮಲ್ಟಿಪ್ಲೆಕ್ಸ್ನಲ್ಲಿ ಗರಿಷ್ಠ 250 ಮತ್ತು ಕನಿಷ್ಠ 75 ರೂ. ಇದೆ. ಅದನ್ನು ಎಸಿ ಥಿಯೇಟರ್ಗಳಲ್ಲಿ ಗರಿಷ್ಠ 100 ಮತ್ತು ಕನಿಷ್ಠ 40 ರೂ.ಗೆ ಇಳಿಸಲಾಗಿದೆ ಮತ್ತು ನಾನ್ ಎಸಿ ಥಿಯೇಟರ್ನಲ್ಲಿ ಗರಿಷ್ಠ 60 ಮತ್ತು ಕನಿಷ್ಠ 20ಕ್ಕೆ ಇಳಿಸಲಾಗಿದೆ.
ವಿತರಕರ ಆಕ್ರೋಶ
ತೆಲಂಗಾಣದ ಚಿತ್ರಮಂದಿರಗಳಲ್ಲಿ ವಾಹನ ಪಾರ್ಕಿಂಗ್ ದರ 30 ರೂಪಾಯಿ ಇದೆ. ಆದರೆ, ಆಂಧ್ರದಲ್ಲಿ ಟಿಕೆಟ್ ಬೆಲೆ ಬಾಲ್ಕನಿ 20, ಫಸ್ಟ್ ಕ್ಲಾಸ್ 15 ಹಾಗೂ ಸೆಕೆಂಡ್ ಕ್ಲಾಸ್ 10 ರೂ. ಇದೆ. ಸರ್ಕಾರದ ಟಿಕೆಟ್ ಬೆಲೆ ಇಳಿಸಿರುವ ಪರಿಣಾಮ ಮೂಲ ಖರ್ಚು ವೆಚ್ಚವನ್ನು ಸಹ ಮರುಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಅಸಮಾಧಾನ ಹೊರಹಾಕಿದ್ದಾರೆ.
ಕಡಿಮೆ ಟಿಕೆಟ್ ದರ ನಿಗದಿಯಿಂದಾಗಿ ಆಂಧ್ರದದಲ್ಲಿ ಅನೇಕ ಸಿನಿಮಾ ಮಂದಿರಗಳನ್ನು ಬಂದ್ ಮಾಡಲಾಗಿದೆ. ಟಿಕೆಟ್ ದರ ಮಾತ್ರವಲ್ಲದೆ, ಸಿನಿಮಾ ಹಾಲ್ ಸುರಕ್ಷತಾ ಕ್ರಮಗಳ ಬಗ್ಗೆಯೂ ಸರ್ಕಾರ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದು, ಸುರಕ್ಷತಾ ಕ್ರಮ ಪಾಲಿಸದ 15 ಚಿತ್ರಮಂದಿಗಳನ್ನು ಸರ್ಕಾರ ಸೀಜ್ ಮಾಡಿದೆ.
ಆಂಧ್ರ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿದ ತೆಲುಗು ಚಿತ್ರರಂಗ ಕೂಡ ಕೋರ್ಟ್ ಮೆಟ್ಟಿಲೇರಿದೆ. ಅಲ್ಲದೆ, ನಾನಿ ಸೇರಿದಂತೆ ಅನೇಕ ನಟರು ಕೂಡ ಸರ್ಕಾರದ ಕ್ರಮವನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಸದ್ಯ ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಆರ್ಆರ್ಆರ್ ಮತ್ತು ರಾಧೆ ಶ್ಯಾಮ್ ಚಿತ್ರದ ಗಳಿಕೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಇನ್ನು ಕರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಂಧ್ರದಲ್ಲಿ ಹಲವು ನಿರ್ಬಂಧಗಳನ್ನು ಈಗಾಗಲೇ ಸರ್ಕಾರ ಹೇರಿದೆ. ಶಾಲೆ, ಕಾಲೇಜು, ಥಿಯೇಟರ್ ಮತ್ತು ಜಿಮ್ಗಳನ್ನು ಮುಚ್ಚಿಸಿ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. (ಏಜೆನ್ಸೀಸ್)
ತೆಲಂಗಾಣದ ಥಿಯೇಟರ್ ಪಾರ್ಕಿಂಗ್ ದರಕ್ಕಿಂತ ಕಡಿಮೆ ಆಂಧ್ರದ ಸಿನಿಮಾ ಟಿಕೆಟ್ ಬೆಲೆ: ಬಾಲ್ಕನಿಗೆ 20 ರೂ.
ಇಂಥಾ ಸಾವು ಯಾರಿಗೂ ಬೇಡ: ಪೆಟ್ರೋಲ್ ಖಾಲಿಯಾಯ್ತೆಂದು ಬೈಕ್ ನಿಲ್ಲಿಸಿದ ಯುವಕನ ಶವ ಬಾವಿಯಲ್ಲಿ ಪತ್ತೆ
ಯಾವ ಕೆಲ್ಸವೂ ಚಿಕ್ಕದಲ್ಲ: ಸೈಕಲ್ನಲ್ಲಿ ಕಾಫಿ ಮಾರುವ ಈ ಇಂಜಿನಿಯರ್ ಕತೆ ಕೇಳಿದ್ರೆ ಮನಕಲಕುತ್ತೆ