ಇಸ್ಲಮಾಬಾದ್: ಟಿ20 ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಪಾಕಿಸ್ತಾನ ಪ್ರಧಾನಿ ಹಾಗೂ ಪಾಕ್ ಕ್ರಿಕೆಟ್ನ ಮಾಜಿ ನಾಯಕ ಇಮ್ರಾನ್ ಖಾನ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು, ವಿಶ್ವ ಕ್ರಿಕೆಟ್ ಭಾರತದ ನಿಯಂತ್ರಣದಲ್ಲಿದೆ ಎಂದಿದ್ದಾರೆ. ಅಭದ್ರತೆ ಕಾರಣ ಹೇಳಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಪಾಕ್ ಪ್ರವಾಸವನ್ನು ಕಡಿದುಕೊಂಡು ಬೆನ್ನಲ್ಲೇ ಪಾಕ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.
ಮಿಡಲ್ ಈಸ್ಟ್ ಐ ಎಂಬ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಇಮ್ರಾನ್ ಖಾನ್, ಭಾರತವು ವಿಶ್ವ ಕ್ರಿಕೆಟ್ ಅನ್ನು ನಿಯಂತ್ರಿಸುತ್ತಿರುವ ಕಾರಣ ಭಾರತ ಪ್ರವಾಸವನ್ನು ಯಾವುದೇ ದೇಶವು ನಿರ್ಧರಿಸುವುದಿಲ್ಲ. ಆಟಗಾರರಿಗೆ ಮತ್ತು ಕ್ರಿಕೆಟ್ ಮಂಡಳಿಗಳಿಗೆ ಹಣವೆಂಬುದು ಇದೀಗ ದೊಡ್ಡ ಆಟಗಾರ. ಭಾರತದಲ್ಲಿ ತುಂಬಾ ಹಣ ಇದೆ. ಹೀಗಾಗಿ ಭಾರತ ವಿಶ್ವ ಕ್ರಿಕೆಟ್ ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಅವರು ಏನು ಹೇಳುತ್ತಾರೆ ಅದೇ ನಡೆಯುತ್ತದೆ. ಭಾರತದ ವಿರುದ್ಧ ಮಾತನಾಡುವ ಧೈರ್ಯ ಮಾಡುವುದಿಲ್ಲ. ಏಕೆಂದರೆ ಅವರು ಒಳಗೊಂಡಿರುವ ಮೊತ್ತಕ್ಕಿಂತ ಭಾರತವು ಹೆಚ್ಚು ಹಣವನ್ನು ಉತ್ಪಾದಿಸುತ್ತಿದೆ ಎಂದು ಅವರಿಗೆ ತಿಳಿದಿದೆ. ಭಾರತ ಈಗ ವಿಶ್ವ ಕ್ರಿಕೆಟ್ನ ಅಧಿಪತಿ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಇಂಗ್ಲೆಂಡ್ ತನ್ನನ್ನು ತಾನೇ ನಿರಾಸೆಗೊಳಿಸಿಕೊಂಡಿದೆ. ಅವರ ಪಾಕಿಸ್ತಾನದೊಂದಿಗೆ ಆಡದಿರಲು ಒಂದು ಪ್ರಮುಖ ಕಾರಣವೆಂದರೆ, ನಿಸ್ಸಂಶಯವಾಗಿ ಹಣ ಎಂದು ಇಮ್ರಾನ್ ಆರೋಪಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ಪಿಸಿಬಿ ಚೇರ್ಮನ್ ರಮೀಜ್ ರಾಜ, “ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಶೇಕಡ 50ರಷ್ಟು ಫಂಡಿಂಗ್ ಐಸಿಸಿಯಿಂದ ಬರುತ್ತದೆ. ಐಸಿಸಿಯನ್ನು ಶೇಕಡ 90 ರಷ್ಟು ಫಂಡ್ ಮಾಡುವುದು ಭಾರತದ ಮಾರುಕಟ್ಟೆ. ಆದ್ದರಿಂದ ಪಾಕ್ ಕ್ರಿಕೆಟ್ನ ಅಸ್ತಿತ್ವ ಭಾರತದ ಬಿಸಿನೆಸ್ ಹೌಸ್ಗಳ ಕೈಯಲ್ಲಿದೆ. ನಾಳೆ ಭಾರತದ ಪ್ರಧಾನಿ ಪಿಸಿಬಿಗೆ ಫಂಡ್ ಮಾಡಬಾರದು ಎಂದು ಯೋಚಿಸಿದಲ್ಲಿ, ನಮ್ಮ ಕ್ರಿಕೆಟ್ ಬೋರ್ಡ್ ಕುಸಿದುಬೀಳುತ್ತದೆ. ಇದು ಭಯ ಹುಟ್ಟಿಸುವ ವಿಚಾರವಾಗಿದೆ” ಎಂದಿದ್ದರು.
ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿ ಆಗಲಿವೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇದುವರೆಗೆ ಭಾರತ ಮತ್ತು ಪಾಕ್ ಟಿ20 ವಿಶ್ವಕಪ್ನಲ್ಲಿ 8 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಭಾರತ 7 ಬಾರಿ ವಿಜಯೋತ್ಸವ ಆಚರಿಸಿದೆ, ಆದರೆ, ಪಾಕ್ ಮಾತ್ರ ಕೇವಲ ಒಂದಕ್ಕೆ ತೃಪ್ತಿಪಟ್ಟುಕೊಂಡಿದೆ. (ಏಜೆನ್ಸೀಸ್)
ಟಿ20 ವಿಶ್ವಕಪ್: ಭಾರತವನ್ನು ಸೋಲಿಸಿದ್ರೆ PCB ಮುಖ್ಯಸ್ಥರಿಗೆ ಸಿಗುವ ಆಫರ್ ಬಗ್ಗೆ ಕೇಳಿದ್ರೆ ದಂಗಾಗ್ತೀರಾ!
ದಯವಿಟ್ಟು ಅವರಂತೆ ನೀವು ಆಗಬೇಡಿ: ಆರ್ಸಿಬಿ ಸೋತ ಬೆನ್ನಲ್ಲೇ ಮನಸ್ಸಿನ ನೋವು ಹೊರಹಾಕಿದ ಮ್ಯಾಕ್ಸ್ವೆಲ್
ಡಿವೋರ್ಸ್ ಬೆನ್ನಲ್ಲೇ ಮಾಡಿದ ಇನ್ಸ್ಟಾಗ್ರಾಂ ಪೋಸ್ಟ್ನಿಂದ ಭಯದಲ್ಲಿ ದಿನ ದೂಡುತ್ತಿರುವ ಸಮಂತಾರ ಡಿಸೈನರ್..!