ತಿರುಪತಿ: ಆಂಧ್ರ ಪ್ರದೇಶದಲ್ಲಿ ಪ್ರಕೃತಿಯ ರೌದ್ರಾವತಾರ ಮುಂದುವರಿದಿದ್ದು, ವರುಣ ಆರ್ಭಟಕ್ಕೆ ಈವರೆಗೂ 17 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬೆಟ್ಟ-ಗುಡ್ಡಗಳಲ್ಲಿ ನೀರು ಧುಮುಕುತ್ತಿದೆ. ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಭಾರೀ ಪ್ರವಾಹದಿಂದಾಗಿ ವಿಶ್ವಪ್ರಸಿದ್ಧ ತಿರುಪತಿ ದೇವಸ್ಥಾನ ಜಲಾವೃತಗೊಂಡಿದ್ದು, ಯಾತ್ರಿಗಳು ಸಿಲುಕಿಕೊಂಡಿದ್ದಾರೆ.
ತಡರಾತ್ರಿ ಸುರಿದ ಭಾರೀ ಮಳೆಗೆ ಅನಂತಪುರ ಜಿಲ್ಲೆಯ ಕಂದ್ರಿ ಪಟ್ಟಣದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಮೂವರು ಮಕ್ಕಳು ಮತ್ತು ವಯಸ್ಸಾದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು, 4ಕ್ಕೂ ಹೆಚ್ಚು ಮಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವುದಾಗಿ ಕದ್ರಿ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಸತ್ಯಬಾಬು ತಿಳಿಸಿದ್ದಾರೆ.
ದೇವಸ್ಥಾನವಿರುವ ತಿರುಮಲ ಬೆಟ್ಟಗಳಿಗೆ ಸಂಪರ್ಕ ಕಲ್ಪಿಸುವ ಘಾಟ್ ರಸ್ತೆ ಮತ್ತು ನಡಿಗೆ ಮಾರ್ಗಗಳನ್ನು ಸಂಪೂರ್ಣ ಮುಚ್ಚಲಾಗಿದೆ. ತಿರುಪತಿಯ ಹೊರವಲಯದಲ್ಲಿರುವ ಸ್ವರ್ಣಮುಖಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಜಲಾಶಯಗಳು ಉಕ್ಕಿ ಹರಿಯುತ್ತಿದೆ. ಅನೇಕ ಜನರು ಪ್ರವಾಹದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಇದೆ. ಆಂಧ್ರದ ಪ್ರವಾಹ ಪೀಡಿತ ಸ್ಥಳಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ.
ಅನೇಕ ರಸ್ತೆಗಳು, ಪ್ರದೇಶಗಳು, ರೈಲು ಮಾರ್ಗಗಳು ಮತ್ತು ವಾಯು ಸಂಚಾರಕ್ಕೂ ವರುಣ ಅಬ್ಬರ ಅಡ್ಡಿಯಾಗಿದೆ. ಅದರಲ್ಲೂ ರಾಯಲಸೀಮಾ ವಲಯ ಅಂತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಗುರುವಾರದಿಂದಲೂ ಮಳೆ ಮಾತ್ರ ನಿಲ್ಲುತ್ತಿಲ್ಲ. ಚೆಯ್ಯುರು ನದಿ ಕೂಡ ತುಂಬಿ ಹರಿಯುತ್ತಿದೆ. ಆಂಧ್ರದ ಅಣ್ಣಮಯ್ಯ ನೀರಾವರಿ ಯೋಜನೆ ಮೇಲೆಯೂ ಪರಿಣಾಮ ಬೀರಿದೆ. ಕಡಪ ವಿಮಾನ ನಿಲ್ದಾಣ ನ. 25ರವೆಗೆ ಮುಚ್ಚಲಾಗಿದೆ.
ಆಂಧ್ರ ಮಾತ್ರವಲ್ಲದೆ, ಕೇರಳ ಮತ್ತು ತಮಿಳುನಾಡಿಗೂ ವರುಣ ತುಂಬಾ ಕಾಟ ಕೊಟ್ಟಿದ್ದಾನೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಪಂಬಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ನಾಳೆ ಪಂಬಾ ಮತ್ತು ಶಬರಿಮಲೆ ಯಾತ್ರೆಯನ್ನು ನಿಷೇಧಿಸಲಾಗಿದೆ. (ಏಜೆನ್ಸೀಸ್)
ಚಂದ್ರಬಾಬು ನಾಯ್ಡು ಕಣ್ಣೀರು: ಬ್ಲೂ ಫಿಲ್ಮ್ ಸಿಡಿ ನೆನಪಿಸಿ ಬೈ ಬೈ ಬಾಬು ಎಂದ ಶಾಸಕಿ ರೋಜಾ!
ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ! ಸಾರ್ವಜನಿಕರು ಹೇಳಿದ್ದು ಹೀಗೆ…
ಜಾಲತಾಣದಲ್ಲಿ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್: ಬೆದರಿಕೆ ಕರೆಗಳು ಬರುತ್ತಿವೆ ಎಂದ ನಾಯಕಿ